ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ವೇಳೆ ಆದ ಒಪ್ಪಂದಂತೆ ಲಡಾಖ್ನ ಶಯಾಕ್ ಮತ್ತು ಗಲ್ವಾನ್ ನದಿ ಸಂಗಮದ ವೈ ಜಂಕ್ಷನ್ನಲ್ಲಿ ಭಾರತದ ಎಲ್ಲೆಯೊಳಗೆ ಹಾಕಿಕೊಂಡಿದ್ದ ಟೆಂಟ್ ಅನ್ನು ತೆಗೆಯುವಂತೆ ಹೇಳಲು ಹೋದ ಭಾರತೀಯ ಸೇನಾಪಡೆಯ ಯೋಧರ ಮೇಲೆ ಚೀನಿ ಯೋಧರು ದಾಳಿ ಮಾಡಿದ್ದು ಇದೀಗ ಬಹಿರಂಗಗೊಂಡಿದೆ.
16 ಬಿಹಾರ್ ರೆಜಿಮೆಂಟ್ನ ಪದಾತಿ ದಳದ ಪೆಟ್ರೋಲಿಂಗ್ ತಂಡ ಒಪ್ಪಂದದಂತೆ ಟೆಂಟ್ ತೆಗೆಯುವಂತೆ ಜೂ.15ರ ಸಂಜೆ ಚೀನಿ ಯೋಧರಿಗೆ ಹೇಳಲು ಟೆಂಟ್ ಬಳಿಗೆ ಹೋಗಿದ್ದರು. ಆಗ 10ರಿಂದ 12 ಚೀನಿ ಯೋಧರು ಅಲ್ಲಿದ್ದರು. ಆದರೆ, ಅವರು ಟೆಂಟ್ ಅನ್ನು ತೆಗೆಯಲು ನಿರಾಕರಿಸಿದರು.
ತಮ್ಮ ಶಿಬಿರಕ್ಕೆ ಮರಳಿದ ಭಾರತೀಯ ಯೋಧರು ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರಿಗೆ ಈ ವಿಷಯ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕರ್ನಲ್ ಸಂತೋಷ್ ಬಾಬು 50 ಯೋಧರ ಜತೆಗೂಡಿ ಚೀನಿ ಟೆಂಟ್ ಬಳಿಗೆ ತೆರಳಿ ಅದನ್ನು ತೆಗೆಯುವಂತೆ ಹೇಳಿದರು. ವಾಗ್ಯುದ್ಧ ಆರಂಭವಾಗುತ್ತಿರುವಂತೆಯೇ ಭಾರತೀಯ ಯೋಧರು ಟೆಂಟ್ ಅನ್ನು ಕೀಳಲು ಮುಂದಾದರು.
ಇದನ್ನೂ ಓದಿ: ಚೀನಿ ಯೋಧರು ಬಾಲ ಬಿಚ್ಚಿದರೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿ
ಆ ವೇಳೆಗಾಗಲೆ 300ರಿಂದ 350 ಯೋಧರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಯೋಧರು ಭಾರತೀಯರ ಮೇಲೆ ದಾಳಿ ಮಾಡಲು ಕಬ್ಬಿಣದ ರಾಡುಗಳು, ಬಡಿಗೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು. ಅಲ್ಲದೆ, ಎತ್ತರದ ಸ್ಥಳದಲ್ಲಿ ಯೋಧರನ್ನು ಇರಿಸಿ, ಕಲ್ಲು ತೂರಾಟಕ್ಕೆ ಸೂಚನೆ ನೀಡಲಾಗಿತ್ತು.
ಭಾರತೀಯ ಯೋಧರು ಟೆಂಟ್ ಕೀಳಲು ಮುಂದಾಗುತ್ತಿದ್ದಂತೆ ಚೀನಿ ಯೋಧರು ಮೊದಲಿಗೆ ಕಲ್ಲು ತೂರಾಟ ಆರಂಭಿಸಿದ್ದಲ್ಲದೆ, ಶಿಬಿರದ ಬಳಿ ಇದ್ದ ಯೋಧರು ಕಬ್ಬಿಣದ ರಾಡು ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಲು ಆರಂಭಿಸಿದರು. ಮೊದಲ ಪೆಟ್ಟು ತಿಂದ ಹವಲ್ದಾರ್ ಪಳನಿ ನೆಲಕ್ಕುರುಳುತ್ತಿದ್ದಂತೆ ಭಾರತೀಯ ಯೋಧರು ಕೂಡ ಪ್ರತಿದಾಳಿ ಆರಂಭಿಸಿದರು. ಬಳಿಕ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅಸುನೀಗಿದರು. ಆನಂತರದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿ, ಪೂರ್ಣ ಪ್ರಮಾಣದ ಘರ್ಷಣೆ ಆರಂಭವಾಯಿತು.
ಅಂದಾಜು ಮೂರು ಗಂಟೆ ಘರ್ಷಣೆ ನಡೆಯಿತು. ಈ ಘರ್ಷಣೆಯಲ್ಲಿ ಚೀನಾದ ಹಲವು ಯೋಧರು ಹತರಾದರು ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡರು.
ಮರುದಿನ ಬೆಳಗ್ಗೆ ಪರಿಸ್ಥಿತಿ ಸ್ವಲ್ಪ ಶಾಂತಗೊಂಡ ನಂತರದಲ್ಲಿ ಮೃತಪಟ್ಟ ಚೀನಿ ಯೋಧರ ದೇಹಗಳನ್ನು ಭಾರತೀಯ ಯೋಧರು ಪಿಎಲ್ಎಗೆ ಹಸ್ತಾಂತರಿಸಿದರು. ಈ ಘರ್ಷಣೆಯಲ್ಲಿ ಭಾರತದ 100ಕ್ಕೂ ಹೆಚ್ಚು ಯೋಧರು ಪಾಲ್ಗೊಂಡಿದ್ದರೆ, ಚೀನಾದ 350 ಯೋಧರು ಇದ್ದರು ಎಂದು ಹೇಳಲಾಗಿದೆ.
ಇಷ್ಟೆಲ್ಲ ಘರ್ಷಣೆ ಆಗುತ್ತಿದ್ದರೂ, ಪೆಟ್ರೋಲ್ ಪಾಯಿಂಟ್ 14ರಲ್ಲಿ ಭಾರತೀಯ ಸೀಮೆಯೊಳಗೆ ಚೀನಿಯರು ಹಾಕಿಕೊಂಡಿದ್ದ ಟೆಂಟ್ ಅನ್ನು ತೆಗೆದುಹಾಕುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಇದಾದ ಬಳಿಕ ಚೀನಿಯರು ಈ ಪ್ರದೇಶದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಭದ್ರತೆಗಾಗಿ ನಿಯೋಜಿಸಿಕೊಂಡಿತ್ತು. ಜತೆಗೆ, ಇದರಿಂದ ಸ್ವಲ್ಪ ಹಿಂಬದಿಯಲ್ಲಿ ಕೂಡ ಹೆಚ್ಚುವರಿ ಯೋಧರನ್ನು ನಿಯೋಜಿಸಿತ್ತು ಎನ್ನಲಾಗಿದೆ.
ಭಾರತೀಯ ಯೋಧರ ಸಾಹಸಗಾಥೆ: ನಾಲ್ಕು ಉಗ್ರ ಸಂಘಟನೆ ಮುಖ್ಯಸ್ಥರು ಖತಂ