ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಈ ಹಿಂದೆ ಬೈಗುಳಕ್ಕೆ ಒಳಗಾಗುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಈ ಬಾರಿ ಭರ್ಜರಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಮಾತ್ರವಲ್ಲ, ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ಕೊಹ್ಲಿಗೆ ಬೈದವರೇ ಈ ದೀಪಾವಳಿ ಸಮಯದಲ್ಲಿ ಭರಪೂರ ಹೊಗಳುತ್ತಿದ್ದಾರೆ.
ದೀಪಾವಳಿ ಹೇಗೆ ಆಚರಿಸಬೇಕು ಎಂದು ಒಂದಷ್ಟು ಸಲಹೆ ಕೊಡುವುದಾಗಿ ಕಳೆದ ವರ್ಷ ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ಆ ಬಳಿಕ ರಾಷ್ಟ್ರವಾದಿಗಳ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದರು. ಹಿಂದೂಗಳ ಹಬ್ಬದ ಸಂದರ್ಭದಲ್ಲಿ ಮಾತ್ರ ನೀವೆಲ್ಲ ಸಲಹೆ ನೀಡಲು ಬರುತ್ತೀರಲ್ಲ, ಬೇರೆ ಹಬ್ಬಗಳಲ್ಲಿ ಎಲ್ಲಿಗೆ ಹೋಗುತ್ತೀರಿ ಎಂದು ಹಲವರು ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು 2015ರಲ್ಲೂ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನು ಆದಷ್ಟೂ ಕಡಿಮೆ ಸುಡಿ ಎಂದು ಹೇಳುವ ಮೂಲಕ ಕೊಹ್ಲಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಆದರೆ ಈ ಸಲ ಶತ್ರುರಾಷ್ಟ್ರ ಪಾಕಿಸ್ತಾನವನ್ನು ಟಿ20 ವಿಶ್ವಕಪ್ನಲ್ಲಿ ತಾವೇ ಭರ್ಜರಿಯಾಗಿ ಆಡಿ, ಅಜೇಯವಾಗಿ ಉಳಿದು ಗೆಲ್ಲಿಸಿ ಕೊಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಭರ್ಜರಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಪಾಕ್ ವಿರುದ್ಧದ ಈ ರೋಚಕ ವಿಜಯದ ಕಾರಣಕ್ಕೇ ಅಂದು ದೀಪಾವಳಿ ಸಂದರ್ಭದಲ್ಲಿ ಕೊಹ್ಲಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವರೂ ಅದನ್ನೆಲ್ಲ ಮರೆತು ಈ ವಿಜಯವನ್ನು ಸಂಭ್ರಮಿಸಿ, ಕೊಹ್ಲಿಯನ್ನು ಹೊಗಳುತ್ತಿದ್ದಾರೆ. ಇನ್ನು ಕೆಲವರು ಕೊಹ್ಲಿಯ ಆಟ, ಭಾರತದ ಗೆಲುವಿನ ಕುರಿತು ಮೆಚ್ಚುಗೆ ಸೂಚಿಸುತ್ತಿದ್ದರೂ, ಕೊಹ್ಲಿ ಇನ್ನೇನಾದರೂ ದೀಪಾವಳಿ ಬಗ್ಗೆ ಸಲಹೆ ಕೊಡಲು ಬರುತ್ತಾರಾ? ಎಂದೂ ಅನುಮಾನದಿಂದ ನೋಡುತ್ತಿದ್ದಾರೆ.
Over the next few weeks, I'll be sharing a series of my personal tips for celebrating a meaningful Diwali with loved ones and family. Stay tuned by following my Pinterest profile 'viratkohli' – link in bio 🪔@Pinterest#diwali2021 #AD pic.twitter.com/KKFxyK3UTG
— Virat Kohli (@imVkohli) October 17, 2021