ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇದೇ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಮೊದಲ ಬಾರಿ ದೈಹಿಕ ಅಂಗವಿಕಲರ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ಆಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ದೈಹಿಕ ಅಂಗವಿಕಲರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಕರ್ಸನ್ ಘಾವ್ರಿ ತಿಳಿಸಿದರು.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಆಯೋಜಿಸಿರುವ 3 ದಿನಗಳ ರಾಷ್ಟ್ರ ಮಟ್ಟದ ದೈಹಿಕ ಅಂಗವಿಕಲರ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರಲ್ಲಿ ಇಂಗ್ಲೆಂಡ್ನಲ್ಲಿ ಆಯೋಜಿಸಿದ್ದ ದೈಹಿಕ ಅಂಗವಿಕಲರ ಮೊದಲ ಟ್ವೆಂಟಿ-20 ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಈ ವರ್ಷ 2ನೇ ಟ್ವೆಂಟಿ-20 ವಿಶ್ವಕಪ್ಗೆ ಭಾರತ ಆತಿಥ್ಯ ವಹಿಸಲಿದೆ ಎಂದರು.
ಈಗಾಗಲೇ ಆತಿಥೇಯ ಭಾರತದ ಜತೆ ದಕ್ಷಿಣ ಆಫ್ರಿಕಾ, ಆಸ್ಟೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ತಂಡಗಳು ಪಾಲ್ಗೊಳ್ಳುವುದನ್ನು ಖಚಿತ ಪಡಿಸಿವೆ. ಪಾಕಿಸ್ತಾನ ತಂಡದ ಭಾಗವಹಿಸುವಿಕೆಯು ಕೇಂದ್ರ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರಲಿದೆ. ಮುಂಬೈ, ಅಹಮದಾಬಾದ್, ಪುಣೆ, ಸೂರತ್, ಬರೋಡಾದಲ್ಲಿ ಪಂದ್ಯಗಳನ್ನು ನಡೆಸಲಾಗುವುದು. ವಿಶ್ವಕಪ್ ಪಂದ್ಯಾವಳಿಯ ದಿನಾಂಕ ಮತ್ತು ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದರು.