ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ನೀಡಿರುವ 241 ರನ್ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ, ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಅರ್ಧಶತಕದ ಆಟದೊಂದಿಗೆ ಕ್ರೀಸ್ನಲ್ಲಿ ಕಚ್ಚಿಕೊಂಡಿರುವ ಟ್ರಾವಿಸ್ ಹೆಡ್ ಹೊಸ ಭರವಸೆ ಮೂಡಿಸಿದ್ದಾರೆ. ಇತ್ತ ಭಾರತಕ್ಕೆ ಮತ್ತೊಂದು ವಿಕೆಟ್ ಪಡೆಯುವ ಅನಿವಾರ್ಯತೆ ಇದ್ದು, ಫೈನಲ್ ಕದನ ರೋಚಕ ಘಟ್ಟಕ್ಕೆ ಹೊರಳುತ್ತಿದೆ.
ಆರಂಭಿಕರಾಗಿ ಕಣಕ್ಕಿಳಿದು ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿರುವ ಹೆಡ್ ಇದೀಗ ಭಾರತಕ್ಕೆ ಬಹುದೊಡ್ಡ ಸವಾಲಾಗಿದ್ದಾರೆ. ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿರುವ ಹೆಡ್ ಅವರನ್ನು ಔಟ್ ಮಾಡುವುದು ಭಾರತಕ್ಕೆ ತುಂಬಾ ಮುಖ್ಯವಾಗಿದೆ. ಇಲ್ಲವಾದಲ್ಲಿ ವಿಜಯಲಕ್ಷ್ಮೀ ಆಸಿಸ್ ಕಡೆಗೆ ವಾಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದು ವೇಳೆ ಹೆಡ್ ವಿಕೆಟ್ ಬಿದ್ದರೆ, ನಂತರ ಬರುವ ಆಟಗಾರ ಕ್ರೀಸ್ಗೆ ಹೊಂದಾಣಿಕೆಯಾಗಲು ಸಮಯ ಬೇಕಾಗುತ್ತದೆ. ಇದು ಭಾರತಕ್ಕೆ ವರವಾಗುತ್ತದೆ. ಹೀಗಾಗಿ ಹೆಡ್ ವಿಕೆಟ್ ಪಡೆಯುವುದು ಅಗತ್ಯವಾಗಿದೆ.
ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಸಹ ಉತ್ತಮ ಜತೆಯಾಟಕ್ಕೆ ಸಾಥ್ ನೀಡಿದ್ದಾರೆ. ಈ ಜೋಡಿ 25ನೇ ಓವರ್ಗೆ 92 ರನ್ಗಳ ಜತೆಯಾಟವಾಡಿದ್ದು, ಭಾರತದಿಂದ ವಿಜಯಲಕ್ಷ್ಮೀಯನ್ನು ತಮ್ಮ ಕಸಿದುಕೊಳ್ಳುತ್ತಿದ್ದಾರೆ. ಹೀಗಾಗಿ ಆದಷ್ಟು ಇವರಿಬ್ಬರ ವಿಕೆಟ್ ಪಡೆಯುವುದು ಭಾರತಕ್ಕೆ ಅಗತ್ಯವಾಗಿದೆ.
ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮ ಬೌಲಿಂಗ್ನಲ್ಲಿ ಕಮಾಲ್ ಮಾಡಿದರು. ಆದರೆ, ಈಗ ಆಸಿಸ್ ವಿಕೆಟ್ ಪಡೆಯಲು ಭಾರತೀಯ ಬೌಲರ್ಗಳು ತಿಣುಕಾಡುತ್ತಿದ್ದಾರೆ. ತಂಡದ ಮೊತ್ತ 16 ರನ್ ಇದ್ದಾಗ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಮೊಹಮ್ಮದ್ ಶಮಿ ಓವರ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ನಿರ್ಣಾಯಕ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ, ಮಿಚೆಲ್ ಮಾರ್ಷ್ (15) ಮತ್ತು ಸ್ಟೀವ್ ಸ್ಮಿತ್ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್ ಅಟ್ಟಿದರು. ಕೇವಲ 43 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಆಸಿಸ್ ಪಡೆ ಇದೀಗ ಸಂಕಷ್ಟಕ್ಕೆ ಸಿಲುಕಿತು. ಆದರೆ, ಹೆಡ್ ಮತ್ತು ಲಬುಶೇನ್ ಕ್ರೀಸ್ ಕಚ್ಚಿಕೊಂಡಿದ್ದು 100 ರನ್ಗಳ ಜತೆಯಾಟದತ್ತ ಬರುತ್ತಿದ್ದಾರೆ.
ಸದ್ಯ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಕ್ರೀಸ್ನಲ್ಲಿದ್ದಾರೆ. 26 ಓವರ್ ಮುಕ್ತಾಯಕ್ಕೆ ಆಸಿಸ್ ಪಡೆ 3 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿದೆ.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತ 240 ರನ್ ಕಲೆಹಾಕಿತು. ಈ ಮೂಲಕ ಆಸಿಸ್ ಗೆಲುವಿಗೆ 241 ರನ್ಗಳ ಗುರಿ ನೀಡಿದೆ. ತಂಡದ ಪರ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್ ಗಳಿಸಿದ್ದ ಗಿಲ್, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ 47 ರನ್ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್, ಅರ್ಧ ಶತಕಕ್ಕೆ ಇನ್ನೂ ಮೂರು ರನ್ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್ಗೆ ಮರಳಿದರು. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.
ವಿರಾಟ್ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದರೆ, ಸಮಿಫೈನಲ್ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್ ಅಯ್ಯರ್ ಕೇವಲ 4 ರನ್ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್ಗಳ ಜತೆಯಾಟ ನೀಡಿತ್ತು.
ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್ಗೆ ಮಿಚೆಲ್ ಸ್ಟಾರ್ಕ್ ಪೆವಿಲಿಯನ್ ಹಾದಿ ತೋರಿದರು. ನೆದರ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್ ಗಳಿಸಿದ್ದ ರಾಹುಲ್, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್ ಗಳಿಸಿದರು. ಆಸಿಸ್ ಬೌಲರ್ಗಳನ್ನು ಎದುರಿಸಲು ರಾಹುಲ್ ತಡಕಾಡಿದರು.
ಉಳಿದಂತೆ ಮೊಹಮ್ಮದ್ ಶಮಿ 6 ರನ್ ಗಳಿಸಿದರೆ, ಜಸ್ಪ್ರೀತ್ ಬೂಮ್ರಾ 1, ಸೂರ್ಯಕುಮಾರ್ ಯಾದವ್ 18 ಹಾಗೂ ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್ ಸಿರಾಜ್ 9 ರನ್ ಗಳಿಸಿ ಅಜೇಯರಾಗಿ ಉಳಿದರು.
ನಿರ್ಣಾಯಕ ಪಂದ್ಯದಲ್ಲಿ ಆಸಿಸ್ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮಿಚೆಲ್ ಸ್ಟಾರ್ಕ್ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್ ಕ್ಯುಮಿನ್ಸ್ ಹಾಗೂ ಜೋಶ್ ಹಜಾಲ್ವುಡ್ ತಲಾ 2 ವಿಕೆಟ್ ಪಡೆದರೆ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಕುಲದೀಪ್ ಯಾದವ್ ರನೌಟ್ಗೆ ತುತ್ತಾದರು.
ಮುಸ್ಲಿಮರು ಭಾರತ ತಂಡದ ಸೋಲು ನಿರೀಕ್ಷಿಸ್ತಾರೆ: ವಿಷ ಕಾರುತ್ತಿರುವ ಪಾಕ್ ನಟಿ ಸಹರ್ ಶಿನ್ವಾರಿ…
ವಿಶ್ವಕಪ್ ಫೈನಲ್: ಒಂದೆಡೆ ಕೂಗು, ಹುರಿದುಂಬಿಸೋ ಜೈಕಾರ, ಇನ್ನೊಂದೆಡೆ ಸದ್ದಡಗಿಸೋ ಹುನ್ನಾರ: ಗೆಲ್ಲೋರು ಯಾರು?