ರಾಜ್ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 36 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದ್ದು, ಸರಣಿ ಗೆಲುವಿಗೆ ಮೂರನೇ ಪಂದ್ಯ ನಿರ್ಣಾಯಕವೆನಿಸಿದೆ.
ಟೀಮ್ ಇಂಡಿಯಾ ನೀಡಿದ್ದ 341 ರನ್ ಗುರಿ ಬೆನ್ನತ್ತಿದ ಆಸಿಸ್ ಪಡೆಗೆ ಡೇವಿಡ್ ವಾರ್ನರ್(15) ಆರಂಭಿಕ ಆಘಾತ ನೀಡಿದರು. ಬಳಿಕ ಬಂದ ಸ್ಟೀವ್ ಸ್ಮಿತ್ ನಾಯಕ ಆ್ಯರೂನ್ ಫಿಂಚ್ ಜತೆಗೂಡಿ ತಂಡಕ್ಕೆ ಚೇತರಿಕೆ ನೀಡಿದಾದರೂ 33 ರನ್ ಗಳಿಸಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿದ್ದ ಫಿಂಚ್ ಸ್ಟಂಪ್ ಔಟಾಗಿ ನಿರ್ಗಮಿಸಿದರು. ಬಳಿಕ ಮೈದಾನಕ್ಕಿಳಿದ ಮಾರ್ನಸ್ ಲಬಸ್ಛಗ್ನೆ, ಸ್ಮಿತ್ಗೆ ಸಾಥ್ ನೀಡಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿ ಮುನ್ನುಗುತ್ತಿರುವಾಗ 46 ರನ್ ಗಳಿಸಿದ್ದ ಲಬಸ್ಛಗ್ನೆ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಅಲೆಕ್ಸ್ ಕ್ಯಾರಿ (18) ಕೂಡ ಔಟಾದರು.
ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಸ್ಟೀವ್ ಸ್ಮಿತ್ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಶತಕದೆಡೆಗೆ ದಾಪುಗಾಲು ಇಡುತ್ತಿರುವಾಗ ಕುಲದೀಪ್ ಯಾದವ್ ಓವರ್ನಲ್ಲಿ ಬೌಲ್ಡ್ ಆಗುವ ಮೂಲಕ ಎರಡು ರನ್ ಅಂತರದಲ್ಲಿ ಸ್ಮಿತ್(98) ಶತಕದಿಂದ ವಂಚಿತರಾದರು. ಇದರ ಬೆನಲ್ಲೇ ಅಸ್ಥಾನ್ ಅಗರ್(25), ಪ್ಯಾಟ್ ಕ್ಯುಮಿನ್ಸ್(0), ಮಿಚೆಲ್ ಸ್ಟಾರ್ಕ್(6), ಆ್ಯಡಮ್ ಝಂಪಾ(6) ರನ್ ಗಳಿಸಿ ಔಟಾದರೆ, ಕೇನ್ ರಿಚರ್ಡ್ಸನ್ 24 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಆಸಿಸ್ ಪಡೆ 49.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 304 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಪಂದ್ಯದಲ್ಲಿ ಆಸಿಸ್ ವಿರುದ್ಧ ಹೀನಾಯ ಸೋಲು ಅನುಭಿಸಿದ್ದ ಭಾರತ ಎರಡನೇ ಪಂದ್ಯದಲ್ಲಿ 36 ರನ್ ಅಂತರದಲ್ಲಿ ಜಯಸಾಧಿಸುವ ಮೂಲಕ ಸರಣಿ ಸಮಬಲ ಸಾಧಿಸಿದೆ. ಇದೀಗ ಸರಣಿ ಗೆಲುವಿಗೆ ಮೂರನೇ ಪಂದ್ಯ ನಿರ್ಣಾಯಕವಾಗಿದೆ.
ಟೀಮ್ ಇಂಡಿಯಾ ಪರ ಮಹಮ್ಮದ್ ಶಮಿ ಪ್ರಮುಖ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಉಳಿದಂತೆ ನವದೀಪ್ ಸೈನಿ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್ ಬೂಮ್ರಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)
ಮೊದಲ ಏಕದಿನ ಪಂದ್ಯದ ಸೋಲಿನ ಕಹಿ: 2ನೇ ಪಂದ್ಯದಲ್ಲಿ ಆಸಿಸ್ ಪಡೆಗೆ ಸವಾಲಿನ ಗುರಿ ನೀಡಿದ ಭಾರತ