ಚೆನ್ನೈ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಅತ್ಯುತ್ತಮ ಪ್ರದರ್ಶನದಿಂದಾಗಿ ಅಜೇಯವಾಗಿ ಫಿನಾಲೆ ಪ್ರವೇಶಿಸಿದ್ದು, ಭಾನುವಾರ (ನವೆಂಬರ್ 19) ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಉತ್ತಮ ಫಾರ್ಮ್ನಲ್ಲಿರುವ ರೋಹಿತ್ ಶರ್ಮಾ ಪಡೆ ಎದುರಾಳಿ ತಂಡವನ್ನು ಬಗ್ಗು ಬಡಿಯುವುದು ಖಚಿತ ಎಂದು ಹೇಳಲಾಗಿದೆ.
ಇನ್ನು ಈ ಕುರಿತು ಮಾತನಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಭಾನುವಾರ ನಡೆಯಲಿರುವ ಫಿನಾಲೆಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಗಳ ಪೈಕಿ ಭಾರತವೇ ಎಲ್ಲರ ಹಾಟ್ ಫೇವರಿಟ್ ಎಂದು ಹೇಳಿದ್ದಾರೆ.
ಚೆನ್ನೈನಲ್ಲಿ ಈ ಕುರಿತು ಮಾತನಾಡಿದ ರವಿಶಾಸ್ರ್ತಿ, ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತಂಡ ನೀಡಿರುವ ಸ್ಥಿರ ಪ್ರದರ್ಶನವನ್ನೂ ಫಿನಾಲೆಯಲ್ಲಿ ಮುಂದುವರೆಸಬೇಕು. ಯಾವುದೇ ಕ್ಷಣದಲ್ಲೂ ವಿಚಲಿತರಾಗದೇ ತಮ್ಮ ಆಟವನ್ನು ಪ್ರದರ್ಶಿಬೇಕು. ಈ ಬಾರಿ ತವರಿನಲ್ಲಿ ಭಾರತ ಆಡುತ್ತಿರುವುದರಿಂದ ಅದರ ಲಾಭವನ್ನು ಪಡೆದಿದೆ ಮತ್ತು ಈ ಬಾರಿ ತಂಡದಲ್ಲಿ ಇರುವ ಬಹುತೇಕ ಆಟಗಾರರು ಅನುಭವಿಗಳಾಗಿದ್ದಾರೆ.
ಇದನ್ನೂ ಓದಿ: ಕಮರಿಗೆ ಉರುಳಿದ ಪಿಕಪ್ ವಾಹನ; ಎಂಟು ಮಂದಿ ಸಾವು
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದಾಗಿದ್ದು, ಅವರು ಸಮರ್ಥವಾಗಿ ಎದುರಾಳಿ ತಂಡವನ್ನು ಎದುರಿಸಿರುವ ರೀತಿ ನೋಡಿದರೆ ಪ್ರಶಸ್ತಿ ಗೆಲ್ಲುವುದು ಖಚಿತ ಎನ್ನಿಸಿದೆ. ಲೀಗ್ ಹಂತದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನವನ್ನು ನೀಡಿದ್ದು, ಫಿನಾಲೆಯಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ.
ಹಾಲಿ ಆವೃತ್ತಿಯಲ್ಲಿ ಮೊಹಮ್ಮದ್ ಶಮಿ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಶಮಿ ಪ್ರತಿ ಬಾರಿ ಬೌಲಿಂಗ್ ಮಾಡಿದಾಗಲೂ ನಾನು ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದೇನೆ. ಸೆಮಿಫಿನಾಲೆಯಲ್ಲೂ ಶಮಿ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ಇನ್ನಿಲ್ಲದಂತೆ ಕಾಡಿದರು. ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಅತ್ಯುತ್ತಮವಾಗಿ ಆಡಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.