ನವದೆಹಲಿ: ಕರೊನಾ ವೈರಸ್ ಸೋಂಕು ಹರಡದಂತೆ ತಡೆಯಲು 21 ದಿನಗಳ ಲಾಕ್ಡೌನ್ ಘೋಷಿಸಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಗೊಳಿಸಿದ್ದು ಹಾಗೂ ಲಾಕ್ಡೌನ್ನ ಆರ್ಥಿಕ ಹಿಂಜರಿತ ತಡೆಗಟ್ಟಲು ಕ್ರಮ ತೆಗೆದುಕೊಂಡಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ವಿಶ್ವಬ್ಯಾಂಕ್ ಪ್ರಶಂಸಿಸಿದೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ವಿಶ್ವಬ್ಯಾಂಕ್ನ ಕಂಟ್ರಿ ಡೈರೆಕ್ಟರ್ ಜುನೈದ್ ಅಹಮದ್, ಈ ಮೂರು ಆಯಾಮಗಳ ಕ್ರಮದ ಮೂಲಕ ಭಾರತ ಸರ್ಕಾರ ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ದಿಟ್ಟ ಕ್ರಮ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಬ್ಯಾಂಕ್ ಭಾರತಕ್ಕೆ 1 ಶತಕೋಟಿ ಡಾಲರ್ ನೆರವು ನೀಡುತ್ತಿದೆ. ಕರೊನಾ ವೈರಸ್ ಸೋಂಕನ್ನು ತಡೆಗಟ್ಟುವ ಜತೆಗೆ ಭಾರತದಲ್ಲಿ ಸೋಂಕು ಹರಡುವ ಕೇಂದ್ರಬಿಂದುಗಳು ಸೃಷ್ಟಿಯಾಗದಂತೆ ಮಾಡುವ ನಿಟ್ಟಿನಲ್ಲಿ ಭಾರತದೊಂದಿಗೆ ವಿಶ್ವಬ್ಯಾಂಕ್ ಮಾಡಿಕೊಳ್ಳುತ್ತಿರುವ ಒಪ್ಪಂದ ಇದಾಗಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ 3 ಅಂಶಗಳನ್ನು ಪಾಲಿಸುವುದು ಅನಿವಾರ್ಯವಾಗುತ್ತದೆ. ಮೊದಲನೆಯದ್ದು ಆರೋಗ್ಯ ಸಮಸ್ಯೆ. ಎರಡನೆಯದ್ದು, ಆರೋಗ್ಯ ಸಮಸ್ಯೆ ಸಂಪೂರ್ಣ ಪರಿಹಾರವಾಗುವವರೆಗೆ ಬಡವರಿಗೆ ಆರ್ಥಿಕವಾಗಿ ತೊಂದರೆಯಾಗದಂತೆ ತಡೆಯುವುದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನಾ ಮೂಲಕ ಭಾರತ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸಿದೆ. ಮೂರನೆಯದ್ದು, 21 ದಿನಗಳ ಲಾಕ್ಡೌನ್ ತೆರವುಗೊಳಿಸಿದ ನಂತರದಲ್ಲಿ ಆರ್ಥಿಕತೆ ಮರುಆರಂಭವಾಗಿ ಸರಿದಿಕ್ಕಿನಲ್ಲಿ ಸಾಗುವಂತೆ ಮಾಡುವುದು. ಇದನ್ನು ಕೂಡ ಗರೀಬ್ ಕಲ್ಯಾಣ ಯೋಜನೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಅವರು ವಿವರಿಸಿದ್ದಾರೆ.
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸ್ವದೇಶಿಗರಿಂದಲೇ ಟೀಕಾ ಪ್ರಹಾರ: ಕರೊನಾ ಹೋರಾಟ ಕೈಚೆಲ್ಲಿ ಕುಳಿತ ಪಾಕ್