ನವದೆಹಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣಬಹುದಾದ ಶಂಕಿತರನ್ನು ಪತ್ತೆಹಚ್ಚಲು ತನಿಖೆ ಮುಂದುವರೆದಿದೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶೋಧ ಕಾರ್ಯಾಚರಣೆಯನ್ನು ಖುದ್ದಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಹಲವು ಶಂಕಿತ ಪ್ರದೇಶಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಪರಿಸ್ಥಿತಿ ಇನ್ನೂ ಉದ್ವಿಗ್ನ ಮತ್ತು ಅಸ್ಥಿರವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಹಲವೆಡೆ ಶಾಂತಿಯುತವಾಗಿ ಧರಣಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಹುಯಿರೆಮ್ ಹೆರೋಡಾಸ್ ಮೈತೆ ಸೇರಿದಂತೆ ನಾಲ್ವರನ್ನು ನಿನ್ನೆ ಬಂಧಿಸಲಾಗಿತ್ತು. ಹೆರೋದಾಸ್ ಮನೆಗೆ ನಿನ್ನೆ ಪೆಚ್ಚಿ ಗ್ರಾಮದ ಮಹಿಳೆಯರು ಬೆಂಕಿ ಹಚ್ಚಿದ್ದರು.
ಬೆಟ್ಟಗಳು ಮತ್ತು ಕಣಿವೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ 126 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ ಮತ್ತು ಉಲ್ಲಂಘನೆಗಾಗಿ 413 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಹೇರ್ ಸ್ಟೈಲ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದ ಮುಖ್ಯೋಪಾಧ್ಯಾಯರು
ವದಂತಿಗಳನ್ನು ನಂಬಬೇಡಿ ಎಂದು ರಾಜ್ಯ ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆಧಾರವಿಲ್ಲದ ವಿಡಿಯೋಗಳ ಪ್ರಸಾರವನ್ನು ದೃಢೀಕರಿಸಲು ಜನರಿಗೆ ಸಹಾಯವಾಣಿ ಸಂಖ್ಯೆ 9233522822 ನೀಡಲಾಗಿದೆ. ಲೂಟಿ ಮಾಡಿದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಪೊಲೀಸರು ಅಥವಾ ಹತ್ತಿರದ ಭದ್ರತಾ ಪಡೆಗಳಿಗೆ ಹಿಂದಿರುಗಿಸುವಂತೆ ಜನರಿಗೆ ಮನವಿ ಮಾಡಲಾಗಿದೆ.
ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವ ವೈರಲ್ ವಿಡಿಯೋವನ್ನು ಸರ್ಕಾರವು ಖಂಡಿಸುತ್ತದೆ ಎಂದು ಎನ್ ಬಿರೇನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ವಿಡಿಯೋ ಬಿಡುಗಡೆಯಾಗಿದ್ದು, ಸೋರಿಕೆಯ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಿದ್ದಾರೆ.
ಸಂಸತ್ತಿನ ಒಳಗೆ ಹೇಳಿಕೆ ನೀಡದ ಪ್ರಧಾನಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.