ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿದಳ (ಎಂಎಲ್ಐಆರ್ಸಿ) ಇದರ ಸೇನಾ ತರಬೇತಿ ಕೇಂದ್ರಗಳಲ್ಲಿ ಮಂಗಳವಾರ ಭಾರತ- ಜಪಾನ ಜಂಟಿ ಸಮರಾಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಕುರಿತು ಅಣಕು ಕಾರ್ಯಾಚರಣೆ ನಡೆಯಿತು.
ಆರಂಭದಲ್ಲಿ ಎಂಎಲ್ಐಆರ್ಸಿಯಲ್ಲಿ ಎರಡು ದೇಶಗಳ ಸೈನಿಕರಿಗೆ ಭಯೋತ್ಪಾದಕರ ವಿರುದ್ಧ ಹೇಗೆ ಕಾರ್ಯಾಚರಣೆ ನಡೆಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಬಳಿಕ ಅಲ್ಲಿಂದ ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆಯ ತರಬೇತಿ ಕೇಂದ್ರ ಆವರಣದಲ್ಲಿ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಭಾರತ- ಜಪಾನ ಯೋಧರು ಉಗ್ರರನ್ನು ಸದೆಬಡಿಯುವ ಅಣಕು ಕಾರ್ಯಾಚರಣೆ ನಡೆಸಿದರು.
ಎಂಎಲ್ಐಆರ್ಸಿ15 ಮರಾಠಾ ಲೈಫ್ ಇನ್ಫೆಂಟ್ರಿ ಮತ್ತು ಜಪಾನಿನ 30ನೇ ಇನ್ಫೆಂಟ್ರಿ ರಿಜಿಮೆಂಟಲ್ ಜಂಟಿಯಾಗಿ 2022ರ ಫೆ.27ರಿಂದ ಮಾ.10ರವರೆಗೆ ಭಾರತ ಮತ್ತು ಜಪಾನ್ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್–2021ರ 3ನೇ ಆವೃತ್ತಿ ನಡೆಸುತ್ತಿದೆ. ಇದರಲ್ಲಿ ಜಪಾನ್ನ 40 ಸೈನಿಕರು, ಭಾರತದ 40 ಸೈನಿಕರು ಜಂಟಿಯಾಗಿ ಸಮರಾಭ್ಯಾಸ ನಡೆಸಿದರು.
ಕಾರ್ಯಾಚರಣೆ ವೇಳೆ ಎಚ್ಚರ
ಯಾವುದೇ ಸಂದರ್ಭದಲ್ಲಿ ಉಗ್ರರು ಗ್ರಾಮಸ್ಥರ ಮೇಲೆ ದಾಳಿ ಮಾಡಿದರೆ ಅಥವಾ ಗ್ರಾಮಗಳನ್ನುಅಟ್ಯಾಕ್ ಮಾಡಿದ ವೇಳೆ ತಕ್ಷಣವೇ ಅವರ ವಿರುದ್ಧ ಕಾರ್ಯಾಚರಣೆ ನಡೆಸುವ ಮೊದಲು, ಆ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ, ನದಿ, ಹಳ್ಳ, ರೈಲ್ವೆ ಮಾರ್ಗಗಳನ್ನು ಬಂದ್ ಮಾಡಬೇಕು. ತದನಂತರ ಉಗ್ರರು ಆ ಸ್ಥಳ ಬಿಟ್ಟು ಬೇರೆ ಕಡೆ ಹೋಗದಂತೆ ಎಚ್ಚರ ವಹಿಸಬೇಕು.
ಬಳಿಕ ಸೈನಿಕರು ತಮ್ಮ ಭದ್ರತೆ ಖಚಿತ ಪಡಿಸಿಕೊಂಡು ಉಗ್ರರ ಮೇಲೆ ದಾಳಿ ನಡೆಸಬೇಕು. ಈ ವೇಳೆ ಆತುರದ ದಾಳಿ ನಡೆಸಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಒಸಿ 36 ರಾಪಿಡ್ನ ಮೇಜರ ಜನರಲ್ ಭವನೇಶ್ ಕುಮಾರ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದರು. ಜಪಾನ ಮಿಲಟರಿ ಕರ್ನಲ್ ಲಾಂಡೋ ಮತ್ತಿತರ ಅಧಿಕಾರಿಗಳು ಇದ್ದರು.
ಇಂದು ಹೀಗೂ ಆಚರಣೆ ಆಗುತ್ತಿದೆ ಒಂದು ದಿನ!; ಅದೇನದು? ಇಲ್ಲಿದೆ ಮಾಹಿತಿ..
ಮನಸ್ಸು ಬಿಚ್ಚಿ ಮಾತಾಡಿ: ವಿಶೇಷ ಅಭಿಯಾನದೊಂದಿಗೆ ಮಹಿಳಾ ದಿನ ಆಚರಿಸಿದ ‘ಕೂ’