More

    ವಿಶ್ವಗುರು: ಆಕ್ರಮಣಕ್ಕೆ ಸಜ್ಜಾಗಿ ನಿಂತಿದೆ ಭಾರತ!

    ವಿಶ್ವಗುರು: ಆಕ್ರಮಣಕ್ಕೆ ಸಜ್ಜಾಗಿ ನಿಂತಿದೆ ಭಾರತ!

    ಕರೊನಾದ ನಂತರ ಚೀನಾ ನಿಜಕ್ಕೂ ಸಂಕಟದಲ್ಲಿದೆ. ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧದ ಆಕ್ರೋಶ ಹರಳುಗಟ್ಟಿದೆ. ಸದ್ಯಕ್ಕೆ ಭಾರತದ ಎದುರಿಗೆ ಸವಾಲಿರುವುದು ಪ್ಯಾಂಗಾಂಗಿನದು ಮಾತ್ರ. ಅದನ್ನು ಭಾರತ ಸರಿಪಡಿಸಿಕೊಂಡು ಚೀನಾಕ್ಕೊಂದು ತಪರಾಕಿ ಕೊಟ್ಟರೆ ಗಾಲ್ವಾನ್ ಕಣಿವೆಯ ಇಡಿಯ ಪ್ರಕರಣ ಭವಿಷ್ಯದಲ್ಲಿ ಚೀನಾದೊಂದಿಗಿನ ಅನೇಕ ಸಮಸ್ಯೆಗಳನ್ನು ಪರಿಹಾರದೆಡೆಗೆ ಒಯ್ಯುತ್ತದೆ!

    ಯುದ್ಧ ಮಾಡುವುದಕ್ಕೂ ಮೊದಲು ಮುಂದೆ ಒದಗಬಹುದಾದ ನಷ್ಟವನ್ನು ಲೆಕ್ಕ ಹಾಕಿರಬೇಕು ಎನ್ನುತ್ತಾನೆ ‘ಆರ್ಟ್ ಆಫ್ ವಾರ್’ ಬರೆದ ಸನ್​ಜೂ. ಚೀನಾದ ಯುದ್ಧನೀತಿ ಆತನ ಚಿಂತನೆಯ ಮೇಲೆ ರೂಪುಗೊಳ್ಳಲ್ಪಟ್ಟಿರುವುದು ಎಂದು ಎಲ್ಲರೂ ಹೇಳುತ್ತಾರಾದ್ದರಿಂದ ಈ ಮಾತನ್ನು ನೆನಪಿಸಿಕೊಡಬೇಕಾಯ್ತು ಅಷ್ಟೇ. ಚೀನಾ ಲಾಭ-ನಷ್ಟಗಳನ್ನು ತೂಗಿಯೇ ಮುಂದೆ ಹೆಜ್ಜೆ ಇಡುತ್ತದೆ ಮತ್ತು ಹೆಜ್ಜೆ ಹಿಂದಿಡುವಲ್ಲಿ ಅದು ಮುಲಾಜು ತೋರುವುದಿಲ್ಲ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂದು ಅದಕ್ಕೆ ಗೊತ್ತಿಲ್ಲವೆಂದೇನೂ ಅಲ್ಲ. ಡೋಕ್ಲಾಂನಲ್ಲಿ ಹೀಗೆಯೇ ಹೆಜ್ಜೆ ಹಿಂದಿಟ್ಟು ಅವಮಾನಿತಗೊಂಡಿದ್ದ ಚೀನಾ ಈ ಬಾರಿ ಮತ್ತೂ ಹೆಚ್ಚಿನ ದಿಗ್ಭŠಮೆಗೆ ಒಳಗಾಗಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದಿರುವ ಭಾರತ-ಚೀನಾ ಯುದ್ಧಸ್ವರೂಪ ಪಡೆದುಕೊಳ್ಳಬಹುದಾದ ಗಲಾಟೆ ಅಂದುಕೊಂಡಷ್ಟು ಸರಳವಲ್ಲ!

    ಹಾಗೆ ಸುಮ್ಮನೆ ಈ ಮೂರ್ನಾಲ್ಕು ತಿಂಗಳ ಘಟನಾವಳಿಗಳನ್ನು ಅವಲೋಕಿಸಿ ನೋಡಿ. ಚೀನಾ ವೈರಸ್ಸನ್ನು ಎದುರಿಸಲು ಭಾರತ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿತ್ತು. ಜಗತ್ತಿನ ಪ್ರಮುಖ ರಾಷ್ಟ್ರಗಳೆಲ್ಲ ಸಂಭಾಳಿಸಿಕೊಳ್ಳಲು ಮಾರ್ಗವನ್ನು ಹುಡುಕುತ್ತಿರುವಾಗಲೇ ಭಾರತ ಮುಲಾಜಿಲ್ಲದೆ ಲಾಕ್​ಡೌನ್ ಹೇರಿಬಿಟ್ಟಿತು. ಎಲ್ಲರೂ ವೈರಸ್ಸಿನ ಬಾಹುಗಳಲ್ಲಿ ನರಳುತ್ತಿರುವಾಗ ಭಾರತ ಏನೂ ಆಗಿಯೇ ಇಲ್ಲವೆಂಬಂತೆ ಶಾಂತವಾಗಿತ್ತು ಮತ್ತು ಈ ಕಾರಣಕ್ಕಾಗಿಯೇ ತನ್ನ ಸಾಂಸ್ಕೃತಿಕ ಬೇರುಗಳನ್ನು ಮತ್ತೆ ಹುಡುಕುವ ಅವಕಾಶ ಪಡೆದುಕೊಂಡಿತ್ತು. ಚೀನಾಕ್ಕೆ ಸಹಿಸಲಾಗದ ಸಂಗತಿಯದು. ಸ್ಪೇನ್, ಇಟಲಿಗಳಂತೆ ಭಾರತದಲ್ಲೂ ಸಾವಿನ ತಾಂಡವ ನಡೆದುಹೋಗಿದ್ದರೆ ಅನಿವಾರ್ಯವಾಗಿ ಭಾರತ ಚೀನಾದ ಬುಡದಲ್ಲಿರುತ್ತಿತ್ತು. ಹಾಗಾಗಲಿಲ್ಲವಲ್ಲ. ಆಗಲೇ ಚೀನಾದ ಬೆಂಬಲಕ್ಕೆ ಬಂದಿದ್ದು ಇಲ್ಲಿನ ಕೆಲವು ಪಕ್ಷಗಳು, ಅಧಿಕಾರದಲ್ಲಿರುವ ಪುಣ್ಯಾತ್ಮರು. ನೆನಪು ಮಾಡಿಕೊಳ್ಳಿ. ದೆಹಲಿಯಲ್ಲಿ ಕೇಜ್ರಿವಾಲ್ ಉತ್ತರಪ್ರದೇಶದ ಕಾರ್ವಿುಕರನ್ನು ದೆಹಲಿಯ ಗಡಿಯವರೆಗೂ ತಂದುಬಿಟ್ಟು ರಾದ್ಧಾಂತ ಸೃಷ್ಟಿಸಿದ್ದು, ತಬ್ಲಿಘಿಗಳು ಸಾವಿನ ತಾಂಡವನೃತ್ಯಕ್ಕೆ ಮುನ್ನುಡಿ ಬರೆದಿದ್ದು, ಲಾಕ್​ಡೌನ್ ತೆಗೆದೇಬಿಡಬೇಕೆಂದು ಚೀನಾ ಕಮ್ಯುನಿಸ್ಟ್ ಪಾರ್ಟಿಯೊಂದಿಗೆ ಈ ಹಿಂದೆಯೇ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ಸು ಒತ್ತಾಯಿಸಿದ್ದು, ಇವೆಲ್ಲವೂ ಕೂಡ ಈ ದಿಕ್ಕಿನತ್ತಲೇ ಸಾಗುವಂತಿತ್ತು. ಆದರೆ ಹೇಗೋ ಭಾರತ ಆ ಭಯಾನಕ ದಿನಗಳಿಂದ ಪಾರಾಗಿಬಿಟ್ಟಿತು.

    ಆಗಲೇ ಚೀನಾ ಹೊಸದೊಂದು ವರಸೆಯನ್ನು ಪ್ರಯೋಗಿಸಿ ಪಾಕಿಸ್ತಾನದ ಮೂಲಕ ಕಾಶ್ಮೀರದಲ್ಲಿ ಗಲಾಟೆ ಆರಂಭಿಸಿತು. ಸ್ವತಃ ತಾನೇ ಕರೊನಾ ಸಂಕಷ್ಟಕ್ಕೆ ಸಿಲುಕಿ ಪತರಗುಟ್ಟುತ್ತಿದ್ದ ಪಾಕಿಸ್ತಾನ ಭಾರತವನ್ನು ಕೆಣಕುವ ದುಸ್ಸಾಹಸ ಮಾಡಿಯೇ ಮಾಡಿತು. ಭಾರತ ಪಾಕಿಸ್ತಾನದ ಈ ಪ್ರಯತ್ನವನ್ನು ಹೊಸಕಿಹಾಕಿತು. ವಾರದಲ್ಲಿ ನಾಲ್ಕಾರು ಭಯೋತ್ಪಾದಕರ ಹೆಣಗಳು ನಿಶ್ಚಿತವಾಗಿ ಬೀಳಲಾರಂಭಿಸಿತು. ಪಾಕಿಸ್ತಾನದ ಈ ಪ್ರಯತ್ನಕ್ಕೆ ಸರಿಯಾದ ಪಾಠ ಕಲಿಸುವ ಭಾರತದ ನಿರ್ಧಾರ ಹೊರಬಿದ್ದಿದ್ದು ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹೇಳಿಕೆಯ ಮೂಲಕ! ಇದು ದೇಶಭಕ್ತ ಭಾರತೀಯರ ನರನಾಡಿಗಳನ್ನೊಮ್ಮೆ ಬೆಚ್ಚಗಾಗಿಸಿದರೆ ಪ್ರತ್ಯಕ್ಷ ಪಾಕಿಸ್ತಾನದೊಳಗೆ ನಡುಕ ಹುಟ್ಟಿಸಿತು ಮತ್ತು ಚೀನಾ ಗಾಬರಿಯಾಗುವಂತೆ ಮಾಡಿಬಿಟ್ಟಿತು. ನೆನಪಿಡಿ, ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಒನ್​ಬೆಲ್ಟ್ ಒನ್​ರೋಡ್’ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕವೇ ಹಾದುಹೋಗುವಂಥದ್ದು. ಅದಾಗಲೇ ಬಿಲಿಯನ್​ಗಟ್ಟಲೆ ಡಾಲರುಗಳನ್ನು ವ್ಯಯಿಸಿರುವ ಚೀನಾಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಮತ್ತಷ್ಟು ಮುಕ್ತಗೊಳಿಸಲಿರುವ ಈ ರಸ್ತೆ ದಾರಿಯುದ್ದಕ್ಕೂ ಬರುವ ರಾಷ್ಟ್ರಗಳನ್ನು ತನ್ನಡಿಗೆ ಬೀಳುವಂತೆ ಮಾಡುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಳಕ್ಕೆ ಸೇರಿಕೊಂಡುಬಿಟ್ಟರೆ ಚೀನಾದ ಈ ಕನಸು ಮಣ್ಣಾದಂತೆ. ಹೀಗಾಗಿ ಭಾರತದ ದೃಷ್ಟಿಯನ್ನು ಬೇರತ್ತ ಸೆಳೆಯುವ ದರ್ದು ಚೀನಾಕ್ಕಿದ್ದೇ ಇತ್ತು. ಏಕೆಂದರೆ ಈ ಬಾರಿ ಪಾಕ್ ಆಕ್ರಮಿತ ಕಾಶ್ಮೀರದ ಕುರಿತಂತೆ ಭಾರತ ಮಾತನಾಡಿದ್ದಷ್ಟೇ ಅಲ್ಲ, ಕೆಲಸ ಆರಂಭಿಸಿಬಿಟ್ಟಿತ್ತು. ಹವಾಮಾನ ವರದಿಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸೇರಿಸಿತು. ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಗಾರರಿಗೆ ಬೇಕಾದ ಶಸ್ತ್ರಗಳನ್ನು ಪೂರೈಸಿತು. ಭಾರತದ ಈ ಆಕ್ರಮಣಕಾರಿ ಮನೋವೃತ್ತಿಯನ್ನು ಗಮನಿಸಿ ಚೀನಾ ಅದನ್ನು ಪೂರ್ತಿ ವಿರುದ್ಧ ದಿಕ್ಕಿಗೆ ತಿರುಗಿಸುವ ಪ್ರಯತ್ನದಲ್ಲಿ ಗಾಲ್ವಾನ್ ಕಣಿವೆಯತ್ತ ಸೈನಿಕರ ಜಮಾವಣೆ ಆರಂಭಿಸಿತು.

    ಈ ಬಗೆಯ ಚೀನಾದ ಧಾಷ್ಟರ್್ಯ ಹೊಸತೇನೂ ಅಲ್ಲ. 1962ರಿಂದಲೂ ಗಡಿಗೆ ಹೊಂದಿಕೊಂಡಂತೆ ಸೈನಿಕರನ್ನು ಜಮಾಯಿಸುವುದು, ಒಂದಷ್ಟು ಶಕ್ತಿ ಪ್ರದರ್ಶನ ಮಾಡಿ ಭಾರತವನ್ನು ಹೆದರಿಸಿ ಮರಳಿ ಹೋಗುವ ಕೆಲಸವನ್ನು ಚೀನಾ ಮಾಡುತ್ತಲೇ ಬಂದಿದೆ. ಪ್ರತೀ ಬಾರಿ ಭಾರತ ಮಾತುಕತೆ ನಡೆಸಿ ಚೀನಾವನ್ನು ಬೇಡಿಕೊಂಡಾಗಲೆಲ್ಲ ಏಷ್ಯಾದಲ್ಲಿ ಚೀನಾದ ಮೌಲ್ಯ ವೃದ್ಧಿಸುತ್ತಲೇ ಹೋಗುತ್ತದೆ. ಡ್ರಾ್ಯಗನ್​ನನ್ನು ಎದುರಿಸುವ ಸಾಮರ್ಥ್ಯವುಳ್ಳ ಏಕೈಕ ರಾಷ್ಟ್ರ ಭಾರತ ಕೈಚೆಲ್ಲಿ ಕುಳಿತಮೇಲೆ ಉಳಿದ ರಾಷ್ಟ್ರಗಳು ಚೀನಾಕೆ ತಗ್ಗಿಬಗ್ಗಿ ನಡೆಯದೇ ಮತ್ತೇನು ಮಾಡುತ್ತವೆ ಹೇಳಿ? 1962ರ ಯುದ್ಧದ ಗೆಲುವು ಈ ದೃಷ್ಟಿಯಿಂದ ಚೀನಾಕ್ಕೆ ಮಹತ್ವದ್ದಾಗಿತ್ತು. ಡೋಕ್ಲಾಂನಲ್ಲಿ ಭಾರತವು ಚೀನಾವನ್ನು ಹಿಮ್ಮೆಟ್ಟಿಸಿದ ನಂತರ ಸ್ವಲ್ಪಮಟ್ಟಿಗೆ ಭಾರತದೊಂದಿಗೆ ಇತರ ರಾಷ್ಟ್ರಗಳ ವಿಶ್ವಾಸ ಕುದುರಿತ್ತು. ಮೋದಿ ಕೂಡ ಮೇಲ್ನೋಟಕ್ಕೆ ಜಿನ್​ಪಿಂಗ್​ರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇರಿಸಿಕೊಂಡು ಸಹಜವಾಗಿದ್ದಂತೆ ಕಂಡುಬಂದರೂ ಒಳಗೊಳಗೇ ದಕ್ಷಿಣಚೀನಾ ಸಮುದ್ರದಲ್ಲಿ ಆಸ್ಟ್ರೇಲಿಯಾ, ಅಮೆರಿಕ, ಜಪಾನ್​ಗಳೊಂದಿಗೆ ಸೇರಿಕೊಂಡು ಚೀನಾವನ್ನು ಮೆತ್ತಗಾಗಿಸುತ್ತಲೇ ಬಂದರು. ಸೂಕ್ಷ್ಮಮತಿಯ ಚೀನಾ ಇದನ್ನು ಅರಿತೇ ನಕ್ಸಲರ, ಭಯೋತ್ಪಾದಕರ ಮತ್ತು ಭಾರತದಲ್ಲಿ ಬುದ್ಧಿಜೀವಿಗಳ ದೇಶ ವಿಭಜಿಸುವ ಕೃತ್ಯಕ್ಕೆ ಸಾಕಷ್ಟು ಬೆಂಬಲ ಕೊಡುತ್ತಿತ್ತು!

    ಕರೊನಾದ ನಂತರ ಚೀನಾ ನಿಜಕ್ಕೂ ಸಂಕಟದಲ್ಲಿದೆ. ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧದ ಆಕ್ರೋಶ ಹರಳುಗಟ್ಟಿದೆ. ಸ್ವತಃ ಚೀನಾದಲ್ಲಿ ಹಣದುಬ್ಬರ ಯಾವ ಪ್ರಮಾಣ ಏರಿದೆ ಎಂದರೆ ಜನರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತಲೇ ಸಾಗಿದೆ.

    ಷಿ ಜಿನ್​ಪಿಂಗ್ ಸದ್ಯದಮಟ್ಟಿಗೆ ಚೀನಾದಲ್ಲಿ ತನ್ನೆಲ್ಲ ಖ್ಯಾತಿಯನ್ನು ಕಳೆದುಕೊಂಡು ವಿಕಟ ಪರಿಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತಲೂ ಸೂಕ್ತ ಸಂದರ್ಭ ಭಾರತಕ್ಕೆ ಮತ್ತೊಂದಿರಲಾರದು. ‘ಭಾರತೀಯ ಸೈನಿಕರ ತ್ಯಾಗಕ್ಕೆ ಖಂಡಿತ ಬೆಲೆಯಿದೆ. ಈ ಬಲಿದಾನವನ್ನು ವ್ಯರ್ಥವಾಗಲು ನಾವು ಬಿಡುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಮುಂದೆ ಉದ್ಘೋಷಿಸಿದರಲ್ಲ ಅದು ಈ ಆಧಾರದ ಮೇಲೆಯೇ ಹೇಳಿದಂಥದ್ದು. ಚೀನಾದ ದೌರ್ಜನ್ಯವನ್ನು ಸಹಿಸಿಕೊಂಡೇ ಬಂದಿದ್ದ ರಾಷ್ಟ್ರಗಳೆಲ್ಲವೂ ಮಾತನಾಡಲಾರಂಭಿಸಿಬಿಟ್ಟಿವೆ. ತೈವಾನ್, ಹಾಂಕಾಂಗ್ ಬಿಡಿ, ಗಡಿಯಲ್ಲಿ ನಗರಾಭಿವೃದ್ಧಿಯ ನೆಪದಲ್ಲಿ ಮ್ಯಾನ್ಮಾರಿನ ಭೂಭಾಗವನ್ನು ನುಂಗುವ ಕನಸು ಕಟ್ಟಿರುವ ದೈತ್ಯರಾಷ್ಟ್ರದ ವಿರುದ್ಧ ಆ ಪುಟ್ಟರಾಷ್ಟ್ರವೂ ದನಿ ಎತ್ತಿದೆ. 5ಜಿ ಕಾಂಟ್ರಾಕ್ಟನ್ನು ಚೀನಾಕ್ಕೆ ಕೊಡಬೇಕೆಂದಿದ್ದ ಇಂಗ್ಲೆಂಡು ತನ್ನ ಆಲೋಚನೆಯನ್ನು ಬದಲಿಸಿದೆ. ಚೀನಾದ ವಿಸ್ತರಣೆಯ ಎಲ್ಲ ಕನಸುಗಳೂ ಒಂದು ಹಂತಕ್ಕೆ ಭಗ್ನಗೊಂಡಂತಾಗಿದೆ. ಜಗತ್ತು ಚೀನಾ ವೈರಸ್ಸನ್ನು ಎದುರಿಸುತ್ತಿರುವಾಗ ಸ್ವತಃ ಚೀನಾ ಜಪಾನಿನ ಸೇನ್​ಕಾಕು ಗುಡ್ಡವನ್ನು ವಶಪಡಿಸಿಕೊಳ್ಳುವ ಧಾವಂತ ತೋರಿ ಕೆಂಗಣ್ಣಿಗೆ ಗುರಿಯಾಗಿದೆ!

    ಮೋದಿ ನಿಜಕ್ಕೂ ಮುತ್ಸದ್ದಿಯೇ. ಈ ಅವಕಾಶವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರು. ಗಡಿಭಾಗದಲ್ಲಿ ರಸ್ತೆಗಳನ್ನು ವೇಗವಾಗಿ ನಿರ್ವಿುಸಿಕೊಂಡರು. ಚೀನಾದೊಂದಿಗೆ ಮಾತುಕತೆ ನಡೆಸಿ ಅವರನ್ನು ಮರಳುವಂತೆ ಮಾಡಿದರು. ಗಾಲ್ವಾನ್ ಕಣಿವೆಯಲ್ಲಿ ಕದನಗಳು ನಡೆದು 20ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಾಗ ದೇಶ ಒಂದು ಹೆಜ್ಜೆ ಮುಂದೆಹೋಗಿ ಆಗಲೇಬೇಕಿದ್ದ ಸೇತುವೆಯನ್ನು ಪೂರ್ಣಗೊಳಿಸಿಕೊಂಡಿತು. ಅಷ್ಟೇ ಅಲ್ಲ, ಈ ಸೈನಿಕರ ಬಲಿದಾನವನ್ನು ನೆನಪಿಸಿಕೊಂಡೇ ಗಾಲ್ವಾನ್ ಕಣಿವೆಯ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹವನ್ನು ಭಾರತ ಆರಂಭಿಸಿತು. ನೆನಪಿಡಿ, ಇಷ್ಟರಮಟ್ಟಿಗೆ ಶಸ್ತ್ರಾಸ್ತ್ರ ಸಂಗ್ರಹಣೆ ಅಲ್ಲಿ ಮಾಡುವುದು ಸಾಧ್ಯವೇ ಇರಲಿಲ್ಲ. ಭಾರತದ ರಕ್ಷಣಾ ಸಚಿವರು ಅರುಣಾಚಲಕ್ಕೋ ಸಿಕ್ಕಿಂಗೋ ಹೋದರೆ ಉರಿಗಣ್ಣಿನಿಂದ ನೋಡುವ ಚೀನಾ ಯುದ್ಧವಿಮಾನಗಳನ್ನು ತೆಗೆದುಕೊಂಡು ಹೋದರೆ ಸುಮ್ಮನಿರುತ್ತಿತ್ತೇನು? ಈಗ ಮೋದಿ ಅಲ್ಲಿದೊಡ್ಡ ಪ್ರಮಾಣದ ಸೇನೆಯನ್ನೇ ನಿಲ್ಲಿಸಿ ಇಡಿಯ ಗಡಿಭಾಗವನ್ನು ಶಾಶ್ವತವಾಗಿ ಸೀಲ್ ಮಾಡಿಬಿಟ್ಟಿದ್ದಾರೆ. ಚೀನಾ ಈ ನಿಟ್ಟಿನಲ್ಲಿ ತಪ್ಪು ಹೆಜ್ಜೆ ಇಟ್ಟಂತೆಯೇ ಸರಿ. ಇನ್ನು ಮುಂದೆ ಅಲ್ಲಿ ಶಾಶ್ವತವಾದ ಕಟ್ಟಡವನ್ನು ಭಾರತೀಯ ಸೇನೆ ನಿರ್ಮಾಣ ಮಾಡಿಕೊಳ್ಳಲಿದೆ. ಚೀನಾವನ್ನೆದುರಿಸಬಲ್ಲ ಒಂದಷ್ಟು ಯುದ್ಧವಿಮಾನಗಳು ಆ ಭಾಗದಲ್ಲಿ ನಿಂತುಬಿಟ್ಟರಂತೂ ಚೀನಾದ ಕನಸಿಗೆ ಕೊಳ್ಳಿಯೇ. ಸದ್ಯಕ್ಕೆ ನಮ್ಮೆದುರಿಗೆ ಸವಾಲಿರುವುದು ಪ್ಯಾಂಗಾಂಗಿನದು ಮಾತ್ರ. ಅದನ್ನು ಭಾರತ ಸರಿಪಡಿಸಿಕೊಂಡು ಚೀನಾಕ್ಕೊಂದು ತಪರಾಕಿ ಕೊಟ್ಟರೆ ಗಾಲ್ವಾನ್ ಕಣಿವೆಯ ಇಡಿಯ ಪ್ರಕರಣ ಭವಿಷ್ಯದಲ್ಲಿ ಚೀನಾದೊಂದಿಗಿನ ಅನೇಕ ಸಮಸ್ಯೆಗಳನ್ನು ಪರಿಹಾರದೆಡೆಗೆ ಒಯ್ಯುತ್ತದೆ!

    ಯುದ್ಧ ಶುರುವಾಗುತ್ತದಾ? ಅನ್ನೋದು ಇನ್ನೊಂದು ಪ್ರಶ್ನೆ. ಯಾವಾಗ ಎರಡೂ ಪಕ್ಷಗಳೂ ಯುದ್ಧಕ್ಕೆ ಸಿದ್ಧವಾಗಿರುತ್ತವೋ ಆಗ ಅದು ನಡೆಯುವುದಿಲ್ಲವೆಂದು ನಿಸ್ಸಂಶಯವಾಗಿ ಅರಿತುಕೊಳ್ಳಬಹುದು. ಒಂದು ಪಕ್ಷ ಮತ್ತೊಂದು ಪಕ್ಷದ ಮೇಲೆ ಅಚಾನಕ್ಕು ದಾಳಿ ನಡೆಸಿದಾಗ ಯುದ್ಧ ಖಾತ್ರಿ. 1962ರಲ್ಲಿ ಚೀನಾ ಅದನ್ನೇ ಮಾಡಿದ್ದು. ನೆಹರೂ ಮೈಮರೆತಿದ್ದಾಗ, ರಕ್ಷಣಾ ಸಚಿವರು ರಜೆಯ ಮೋಜು ಅನುಭವಿಸುತ್ತಿದ್ದಾಗ ಚೀನಾ ಅಚ್ಚರಿಯ ಆಕ್ರಮಣ ನಡೆಸಿ ಗೆದ್ದುಬಿಟ್ಟಿತ್ತು. ಈ ಬಾರಿ ಹಾಗಿಲ್ಲ. ಭಾರತ ಪೂರ್ಣತಯಾರಿಯೊಂದಿಗೆ ನಿಂತುಬಿಟ್ಟಿರುವುದರಿಂದ, ಯುದ್ಧಕ್ಕೂ ಮುನ್ನ ಜಗತ್ತಿನ ಶಕ್ತ ರಾಷ್ಟ್ರಗಳೆಲ್ಲವೂ ನಮ್ಮೊಂದಿಗೆ ಕೈಜೋಡಿಸಿರುವುದರಿಂದ ಯುದ್ಧ ನಡೆಯುವುದಿಲ್ಲವೆಂಬುದು ಖಾತ್ರಿ. ಅದಕ್ಕೆ ಪೂರಕವಾಗಿ ಚೀನಾ ಇಡುತ್ತಿರುವ ಹೆಜ್ಜೆಗಳೂ ವಿಚಿತ್ರ ಎನಿಸುವಂತಿವೆ. ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ಗ್ಲೋಬಲ್​ಟೈಮ್್ಸ’ ಚೀನಾ ಯುದ್ಧಕ್ಕೆ ನಡೆಸುತ್ತಿರುವ ತಯಾರಿಯ ವಿಡಿಯೋಗಳನ್ನು ಹಂಚಿಕೊಂಡು ಹೆದರಿಕೆ ಹುಟ್ಟಿಸುವ ಪ್ರಯತ್ನ ಮಾಡಿತು. ಆದರೆ ಶೂಟ್ ಮಾಡಿ ಎಡಿಟ್ ಮಾಡಿದ ಈ ವಿಡಿಯೋಗಳು ಯುದ್ಧ ತಯಾರಿಯದ್ದಂತೂ ಅಲ್ಲವೆಂದು ಎಂಥವನಿಗೂ ಅರ್ಥವಾಗುವಂತಿತ್ತು. ಆ ಪತ್ರಿಕೆ ಹಂಚಿಕೊಂಡ ಚಿತ್ರವೊಂದರಲ್ಲಿ ಯುದ್ಧಟ್ಯಾಂಕ್​ನ ಹೆಡ್​ಲೈಟ್ ಒಂದು ಒಡೆದು ಹೋಗಿರುವುದನ್ನು ಕಂಡು ಟ್ವಿಟರ್​ನಲ್ಲಿ ಜಗತ್ತಿನ ಜನರೆಲ್ಲ ಆಡಿಕೊಂಡು ನಕ್ಕಿದ್ದರು. ಇಷ್ಟಕ್ಕೂ ಮೀರಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ಮೋದಿಯವರ ಮತ್ತು ಪ್ರಧಾನಮಂತ್ರಿ ಕಚೇರಿಯ ಖಾತೆಗಳನ್ನು ತೆಗೆದುಹಾಕಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಅವಮಾನವನ್ನು ಚೀನಾ ಎದುರಿಸಿತು.

    ಚೀನಾ ಭಾರತದ ಗಮನವನ್ನು ಗಾಲ್ವಾನ್​ನತ್ತ ತಿರುಗಿಸಿ ಪಿಒಕೆ ಉಳಿಸಿಕೊಳ್ಳಬೇಕೆಂಬ ತಂತ್ರಗಾರಿಕೆಯನ್ನು ಮಾಡಿದ್ದು ನಿಜ. ಭಾರತ ಅದೇ ತಂತ್ರಗಾರಿಕೆಯನ್ನು ಈಗ ಬಳಸಿಕೊಂಡಿದೆ. ಎಲ್ಲರ ದೃಷ್ಟಿ ಇತ್ತ ನೆಟ್ಟಿರುವಾಗಲೇ ಬಲೂಚಿಸ್ತಾನದಲ್ಲಿ ದಂಗೆ ಭುಗಿಲೇಳುವಂತೆ ನೋಡಿಕೊಂಡಿದೆ. ಸಿಂಧ್​ಪ್ರಾಂತ್ಯ ಉರಿದುಹೋಗುತ್ತಿದೆ. ನಾವು ನೀವೆಲ್ಲರೂ ಚೀನಾ-ಭಾರತ ಯುದ್ಧದ ಕುರಿತಂತೆ ಮಾತನಾಡುತ್ತಿರುವಾಗಲೇ ಭಾರತ ಪಿಒಕೆಯನ್ನು ವಿಮುಕ್ತಗೊಳಿಸಿದರೆ ಯಾರೂ ಅಚ್ಚರಿಪಡಬೇಡಿ. ಈ ಲೇಖನ ನೀವು ಓದುವ ವೇಳೆಗಾಗಲೇ ಕಾಶ್ಮೀರವನ್ನು ಭಯೋತ್ಪಾದಕ ಮುಕ್ತ ಮಾಡುವ ಭಾರತೀಯ ಸೇನೆಯ ಸಂಕಲ್ಪ ಬಲುದೊಡ್ಡ ಹಂತದಲ್ಲಿ ಸಾಕಾರಗೊಂಡಿರುತ್ತದೆ. ಅದಾಗಲೇ ಕಾಶ್ಮೀರದಲ್ಲಿನ ಎಲ್ಲ ನೆಟ್​ವರ್ಕ್ ಅನ್ನು ಸ್ತಬ್ಧಗೊಳಿಸಿ ಮನೆ-ಮನೆಗೂ ನುಗ್ಗಿ ಭಯೋತ್ಪಾದಕರನ್ನು ಅರಸಿ ಬಡಿಯಲಾಗುತ್ತಿದೆ. ಈ ವೇಳೆಗೆ ಪಾಕಿಸ್ತಾನ ಡ್ರೋನ್​ನ ಮೂಲಕ ಶಸ್ತ್ರಾಸ್ತ್ರಗಳನ್ನು ಭಯೋತ್ಪಾದಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದು, ಇದು ಚೀನಾದ ಕೊನೆಯ ಹತಾಶ ಪ್ರಯತ್ನ ಎಂಬುದು ಎಂಥವನಿಗೂ ಅರಿವಾಗುತ್ತದೆ.

    ಇವೆಲ್ಲದರ ನಡುವೆ ಕಾಂಗ್ರೆಸ್ಸಿನ, ಬುದ್ಧಿಜೀವಿಗಳ ವೇದನೆ ಮಾತ್ರ ಹೇಳತೀರದ್ದು. ಚೀನಾದ ಕುರಿತಂತೆ ಕಳೆದ ಮೂರ್ನಾಲ್ಕು ದಶಕಗಳಿಂದ ಅವರು ಕಟ್ಟಿಕೊಟ್ಟಿದ್ದ ಭ್ರಾಮಕ ಕಲ್ಪನೆಗಳೆಲ್ಲ ತಪತಪನೆ ಉರುಳಿ ಬೀಳುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದು ಭಾರತ ಚೀನಾವನ್ನು ತೆಪ್ಪಗಾಗಿಸಿಬಿಟ್ಟರೆ ಇನ್ನು ಮುಂದೆ ಕಂಡಕಂಡವರೆಲ್ಲ ಬಡಿದು ಹೋಗುತ್ತಾರೆ, ಸಾರ್ವಜನಿಕ ಗಂಟೆಯಂತೆ! ಬಹುಶಃ ಪ್ರಧಾನಮಂತ್ರಿ ಮೋದಿಯವರ ಕಂಗಳಲ್ಲಿದ್ದ ಆ ವಿಶ್ವಾಸವನ್ನು ನನ್ನಂತೆ ನೀವೂ ಗುರುತಿಸಿರಬೇಕೆಂದು ಭಾವಿಸುತ್ತೇನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts