ಇಂಡಿ: ತಹಸೀಲ್ದಾರ್ ಕಚೇರಿ, ಭೂಮಾಪನ ಇಲಾಖೆ ಸೇರಿ ಹಳ್ಳಿಗಳಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ಬರುವ ರೈತರು ಹಾಗೂ ಜನಸಾಮಾನ್ಯರ ಕೆಲಸಗಳನ್ನು ಅಧಿಕಾರಿಗಳು ಸತಾಯಿಸದೆ ಕೂಡಲೇ ಮಾಡಿಕೊಡಬೇಕು. ಅವರಿಗೆ ತೊಂದರೆಯಾದರೆ ಸಹಿಸುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಖಡಕ್ ಸೂಚನೆ ನೀಡಿದರು.
ಮಿನಿವಿಧಾನಸೌಧದ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆ ಹಂಗಾಮಿನಲ್ಲಿ ಎಲ್ಲೆಡೆ ಕುಡಿಯುವ ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಈಗಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ತಾಕೀತು ಮಾಡಿದರು.
ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಮಸ್ಯೆಯಾದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ. ರೈತರಿಗೆ ಅಗತ್ಯ ಸೌಲಭ್ಯ ದೊರೆಯುವಂತೆ ಮಾಡಬೇಕು. ಕಡಲೆಯನ್ನು ಹೆಚ್ಚು ಬೆಳೆಯುವ ಪ್ರದೇಶದಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಅಥರ್ಗಾ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಲಿಂಬೆ ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಹೆಸ್ಕಾಂ ಅಧಿಕಾರಿಗಳು ರೈತರ ಸುಟ್ಟ ಟಿ.ಸಿ. ಗಳನ್ನು ಕೂಡಲೇ ರಿಪೇರಿ ಮಾಡಿಕೊಡುವ ವ್ಯವಸ್ಥೆ ಮಾಡಬೇಕು ಎಂದರು. ಕೃಷಿ, ತೋಟಗಾರಿಕೆ, ಹೆಸ್ಕಾಂ, ಶಿಕ್ಷಣ, ಅರಣ್ಯ, ಶಿಶು ಅಭಿವೃದ್ಧಿ, ನೀರಾವರಿ, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿವಿಧ ಇಲಾಖೆ ಅಧಿಕಾರಿಗಳು ವರದಿ ವಾಚಿಸಿದರು.
ತಾಪಂ ಅಧ್ಯಕ್ಷ ಅಣ್ಣಾರಾಯ ಬಿದರುಕೋಟೆ, ಇಒ ಡಾ.ವಿಜಯಕುಮಾರ ಆಜೂರ, ತಹಸೀಲ್ದಾರ್ ಚಿದಾನಂದ ಕುಲಕರ್ಣಿ ವೇದಿಕೆಯಲ್ಲಿ ಇದ್ದರು. ಜಿಪಂ ಇಂಜಿನಿಯರ್ ಎಸ್.ಆರ್. ರುದ್ರವಾಡಿ, ಕಂದಾಯ ನಿರೀಕ್ಷಕ ಬಿ.ಎ.ರಾವೂರ, ಸಿಪಿಐ ರಾಜಶೇಖರ ಬಡದೇಸಾರ, ಚಿಕ್ಕ ನಿರಾವರಿ ಇಲಾಖೆ ಇಂಜಿನಿಯರ್ ಬಿ.ವೈ. ಬಿರಾದಾರ, ಹೆಸ್ಕಾಂ ಇಂಜಿನಿಯರ್ ಎಸ್.ಪಿ. ಮೆಡೆದಾರ, ಬಿಇಒ ವಿ.ಯು. ರಾಠೋಡ, ತಾಲೂಕು ಆರೋಗ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ, ರಾಜಕುಮಾರ ತೊರವಿ ಇತರರು ಇದ್ದರು.