ಇಂಡಿ: ರಸಗೊಬ್ಬರ, ಪೆಟ್ರೋಲ್, ಡಿಸೇಲ್ ಮತ್ತು ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮತ್ತು ಕೇಂದ್ರ, ರಾಜ್ಯ ಸರ್ಕಾರದ ನಡೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ -2 ತಹಸೀಲ್ದಾರ್ ಸಿ.ಎಂ. ಬಣಕಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ನೇತೃತ್ವ ವಹಿಸಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡೆಯಿಂದ ಸಂಕಷ್ಟ ಎದುರಾಗಿದೆ. ದೊಡ್ಡ-ದೊಡ್ಡ ಉದ್ದಿಮೆದಾರಿಗೆ, ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಾರಿಗೆ ನೌಕರರು 6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಸರ್ಕಾರ ತನ್ನ ಮೊಂಡು ನಡೆಯಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಸುವಲ್ಲಿ ವಿಲವಾಗಿದೆ ಎಂದರಲ್ಲದೆ, ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಕೈಬಿಟ್ಟು ಪೆಟ್ರೋಲ್, ಡಿಸೇಲ್, ಗ್ಯಾಸ್, ಸಾಮಾನ್ಯ ದಿನಸಿ ವಸ್ತುಗಳ ಬೆಲೆ ಮತ್ತು ರಸಗೊಬ್ಬರ ಬೆಲೆ ಕಡಿಮೆ ಮಾಡಿ ಜನರ ಹಿತಾಸಕ್ತಿ ಕಾಪಾಡಬೇಕೆಂದು ಮನವಿ ಮಾಡಿದರು.
ಸಿದ್ದು ಡಂಗಾ, ಹಣಮಂತ ಹೂನಳ್ಳಿ, ಶ್ರೀಶೈಲಗೌಡ ಪಾಟೀಲ, ಬಸವರಾಜ ಹಂಜಗಿ, ಮಹಿಬೂಬ್ ಬೇನೂರ, ರವಿ ಸಿಂಧೆ, ಮುನ್ನಾ ವಾಲಿಕಾರ, ಬಿ.ಎಲ್. ರಾಠೋಡ, ಮಹಮ್ಮದ್ ಬಾಗವಾನ, ರಮೇಶ ರಾಠೋಡ, ರಾಜು ಮುಲ್ಲಾ ಇತರರಿದ್ದರು.