ಚಿತ್ತಾಪುರ: ಪರೀಕ್ಷೆ ಎಂಬುದು ಯುದ್ಧವಲ್ಲ, ಹಾಗಾಗಿ ಆತಂಕ ಬೇಡ. ಇದು ಪರೀಕ್ಷಾ ಸಮಯವಾದ್ದರಿಂದ ವಿದ್ಯಾರ್ಥಿಗಳ ಗಮನ ಓದಿನ ಕಡೆ ಮಾತ್ರ ಇರಬೇಕು ಎಂದು ಶಿಕ್ಷಣ ಪ್ರೇಮಿ ಮತ್ತು ಸಾಹಿತಿ ಕೆ.ಎಂ.ವಿಶ್ವನಾಥ ಮರತೂರ ಹೇಳಿದರು.
ಪಟ್ಟಣದ ನಾಗಾವಿ ಕ್ಯಾಂಪಸ್ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಭಯ ನಿವಾರಣಾ ಕಾರ್ಯಾಗಾರದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೇ ಇರುತ್ತದೆ. ಆದರೆ ಇದನ್ನು ನಿವಾರಿಸಿ ಪರೀಕ್ಷೆ ಬರೆದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಿದೆ ಎಂದರು.
ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭಕ್ಕೂ ಮುನ್ನ ಸಿದ್ಧತೆ ಮಾಡಿಕೊಳ್ಳುವುದು ಮುಖ್ಯ, ಅದರಲ್ಲಿಯೂ ಪರೀಕ್ಷೆಗೂ ಮುನ್ನ ವೇಳಾಪಟ್ಟಿ ಸಿದ್ಧಪಡಿಸಿ ಪ್ರತಿ ವಿಷಯಗಳನ್ನು ಮರು ಅಭ್ಯಾಸ ಮಾಡಿಕೊಳ್ಳುವ ಕ್ರಮ ಬೆಳೆಸಿಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಓದಬೇಡಿ ಇಷ್ಟಪಟ್ಟು ಓದಿ, ವಿಶ್ರಾಂತಿ ಹಾಗೂ ಆರೋಗ್ಯದ ಕಡೆಗೂ ಗಮನ ನೀಡಬೇಕೆಂದು ಹೇಳಿದರು.
ರಾವೂರ ಸಚ್ಚಿದಾನಂದ ಪ್ರೌಢ ಶಾಲೆಯ ಶಿಕ್ಷಕ ಸಿದ್ದಲಿಂಗ ಬಾಳಿ, ಬಿಆರ್ಸಿ ಅಧಿಕಾರಿ ಮಲ್ಲಿಕಾರ್ಜುನ ಸೇಡಂ, ಎಂ.ಬಿ.ಪಾಟೀಲ್ ಪಿಯು ಕಾಲೇಜು ಪ್ರಾಚಾರ್ಯ ಸೋಮಶೇಖರ ಕಲ್ಲಶೆಟ್ಟಿ ಮಾತನಾಡಿದರು.
ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜೇಂದ್ರ ಪ್ರಸಾದ ಕಾರ್ಯಾಗಾರ ಉದ್ಘಾಟಿಸಿದರು. ನಾಗಾವಿ ಸಾಹಿತ್ಯ ಸಾಂಸ್ಕೃತಿ ಪರಿಷತ್ ಅಧ್ಯಕ್ಷ ಕಾಶೀನಾಥ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಗುರು ವಿನೋದ ಗೌಳಿ, ಪ್ರಮುಖರಾದ ಮಹ್ಮದ್ ಮಶಾಕ್, ಶಿವಬಸಪ್ಪ ಗುತ್ತೆಪ್ಪನವರ್, ಶಿವಪುತ್ರಪ್ಪ, ಶಿವರಾಜ, ಸಂತೋಷಕುಮಾರ, ಸಂಗಮೇಶ ರೋಣದ್ ಇತರರಿದ್ದರು.
ಮೋನಯ್ಯ ಪಂಚಾಳ ಪ್ರಾರ್ಥಿಸಿದರು, ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದರು, ನಟರಾಜ ಶಿಲ್ಪಿ ನಿರೂಪಣೆ ಮಾಡಿದರು.