ಕಮಲನಗರ: ಜನಸಾಮಾನ್ಯರು ನೆಮ್ಮದಿ ಬದುಕು ಸಾಗಿಸಬೇಕು. ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಜನಕಲ್ಯಾಣವೇ ಸರ್ಕಾರದ ಧ್ಯೇಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಎಂ.ಎ. ಬಿರಾದಾರ ಫಂಕ್ಷನ್ ಹಾಲ್ನಲ್ಲಿ ಶುಕ್ರವಾರ ಜಿಲ್ಲಾಡಳಿತ ಆಯೋಜಿಸಿದ್ದ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶ ಉದ್ಘಾಟಿಸಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಮಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ೧೫ ಕೋಟಿ ಅನುದಾನ ಬಿಡುಗಡೆ ಮಾಡಿಸಿ ವರ್ಷದೊಳಗೆ ಲೋಕಾರ್ಪಣೆ ಮಾಡಲಾಗುವುದು. ಜತೆಗೆ ಕಮಲನಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸುಶೀಲಾ ಸಜ್ಜನಶೆಟ್ಟಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಗ್ರೇಡ್-೨ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಮಾಣಿಕರಾವ ಪಾಟೀಲ್, ತಾಪಂ ಎಡಿ ಶಿವಕುಮಾರ ಘಾಟೆ, ಹಣಮಂತರಾಯ ಕೌಟಗೆ, ಟಿಎಚ್ಒ ಡಾ.ಗಾಯತ್ರಿ ವಿಜಯಕುಮಾರ, ಬಿಆರ್ಪಿ ಶಶಿಕುಮಾರ ಬಿಡವೆ, ಮುಖಂಡ ಪ್ರವೀಣ ಪಾಟೀಲ್, ಸಂತೋಷ ಬಿರಾದಾರ, ಸಾಮಾಜಿಕ ಕಾರ್ಯಕರ್ತ ಗುಂಡಪ್ಪ ಬೆಲ್ಲೆ ಹಾಗೂ ಜಿಲ್ಲಾ , ತಾಲೂಕು ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಫಲಾನುಭವಿಗಳು ಇದ್ದರು.
೧೫೪ ಅರ್ಜಿ ಸ್ವೀಕಾರ: ಜನಸ್ಪಂದನ ಸಭೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಸಚಿವರಿಗೆ ಅರ್ಜಿ ಸಲ್ಲಿಸಿದರು. ಕಂದಾಯ ಇಲಾಖೆ-೨೮, ಭೂ ಇಲಾಖೆ ೭, ಲೋಕೋಪಯೋಗಿ ೯, ಕೆಎಂಎಫ್-೨, ಜೆಸ್ಕಾಂ-೬, ಸಾರಿಗೆ-೭, ಶಿಕ್ಷಣ-೭, ಆಹಾರ-೩, ಲೀಡ್ ಬ್ಯಾಂಕ್-೧, ಕೃಷಿ-೨, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-೧, ಜಿಲ್ಲಾಧಿಕಾರಿ ಕಚೇರಿ-೩, ಸಮಾಜ ಕಲ್ಯಾಣ ಇಲಾಖೆ-೪, ಆಸ್ಪತ್ರೆ-೨, ಸಣ್ಣ ನೀರಾವರಿ-೧, ಕೈಗಾರಿಕೆ ಇಲಾಖೆ-೨, ಅಂಬೇಡ್ಕರ್ ಅಭಿವೃದ್ಧಿ ನಿಗಮ-೧, ಸಹಕಾರ-೨, ಕಾರ್ಮಿಕ ಇಲಾಖೆ-೧, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-೬೧, ರಾಷ್ಟ್ರೀಯ ಹೆದ್ದಾರಿ-೧, ಪೊಲೀಸ್ ಇಲಾಖೆ-೧, ಕನ್ನಡ ಮತ್ತು ಸಂಸ್ಕೃತಿ ಇಲಾಖೆ-೧, ಜಿಲ್ಲಾ ನೋಂದಣಾಧಿಕಾರಿ-೧ ಹೀಗೆ ಒಟ್ಟು ೧೫೪ ಅರ್ಜಿ ಸ್ವೀಕರಿಸಲಾಯಿತು.
ಜನಸ್ನೇಹಿ ಆಡಳಿತ ನಡೆಸುವ ಉದ್ದೇಶದಿಂದ ಸರ್ಕಾರ ಎಲ್ಲ ತಾಲೂಕುಗಳಲ್ಲಿ ಜನಸ್ಪಂದನೆ ಸಭೆ ನಡೆಸುತ್ತಿದೆ. ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗಿದೆ. ಉಳಿದ ಅಹವಾಲುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವAತೆ ಸಂಬAಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೆ ತಲುಪುತ್ತಿರುವುದಕ್ಕೆ ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ಜನಸ್ತೋಮವೇ ಸಾಕ್ಷಿ.
| ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ