ನವದೆಹಲಿ: ದೇಶದಲ್ಲಿ ರೈಲು ಸಂಚಾರ ಲಾಕ್ಡೌನ್ ಪೂರ್ವದ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಕುರುಹು ದೊರೆಯುತ್ತಿರುವಂತೆ, ದೇಶಾದ್ಯಂತ ಆಯ್ದ ನಿಲ್ದಾಣಗಳಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ಗಳನ್ನು ತೆರೆಯಲು ಭಾರತೀಯ ರೈಲ್ವೆ ಮುಂದಾಗಿದೆ. ಶುಕ್ರವಾರದಿಂದ ಆರಂಭವಾಗಿ ಸದ್ಯ ಸಂಚಾರ ಆರಂಭಿಸಿರುವ ವಿಶೇಷ ರೈಲುಗಳು ಮತ್ತು ಜೂನ್ 1ರಿಂದ ಸಂಚಾರ ಆರಂಭಿಸಲಿರುವ ರೈಲುಗಳ ಪ್ರಯಾಣಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಕೌಂಟರ್ಗಳನ್ನು ಹಂತ ಹಂತವಾಗಿ ಹೆಚ್ಚಿಸುವುದಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಐಆರ್ಸಿಟಿಸಿ ವೆಬ್ಸೈಟ್ ಮತ್ತು ಆ್ಯಪ್ಗಳಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿತ್ತು. ಕೆಲವೇ ಗಂಟೆಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿತ್ತು. ಇದಲ್ಲದೆ, ರಿವರ್ಸ್ ಬುಕ್ಕಿಂಗ್ (ತಾವಿರುವ ಸ್ಥಳದಿಂದ ಕೆಲಸ ಮಾಡುವ ಸ್ಥಳಗಳಿಗೆ ಮರಳುವುದು) ಭರಾಟೆ ಕೂಡ ಹೆಚ್ಚಾಗಿತ್ತು.
ರೈಲು ನಿಲ್ದಾಣಗಳ ಕೌಂಟರ್ಗಳಲ್ಲದೆ, ವಿವಿಧ ನಗರಗಳಲ್ಲಿ ಇರುವ ಯಾತ್ರಿ ಟಿಕೆಟ್ ಸುವಿಧಾ ಕೇಂದ್ರಗಳಲ್ಲಿ ಕೂಡ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು, ಕ್ಯಾನ್ಸಲ್ ಮಾಡಬಹುದಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿನ ಕೌಂಟರ್ಗಳು: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ (ಮೇ 22) ವಿವಿಧ ವಿಭಾಗಗಳ ಆಯ್ದ ರೈಲು ನಿಲ್ದಾಣಗಳಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಕೌಂಟರ್ಗಳು ಕಾರ್ಯಾರಂಭಿಸಲಿವೆ.
ಹುಬ್ಬಳ್ಳಿ ವಿಭಾಗದಲ್ಲಿ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ವಿಜಯಪುರ, ಧಾರವಾಡ, ಹೊಸಪೇಟೆ ಮತ್ತು ವಾಸ್ಕೋ ಡಾ ಗಾಮಾ ರೈಲು ನಿಲ್ದಾಣಗಳಲ್ಲಿ ಕೌಂಟರ್ಗಳು ಕಾರ್ಯಾರಂಭಿಸಲಿವೆ.
ಬೆಂಗಳೂರು ವಿಭಾಗದಲ್ಲಿ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್, ಬಂಗಾರಪೇಟೆ, ಕೆಂಗೇರಿ, ಕೆ.ಆರ್. ಪುರ ಮತ್ತು ಎಸ್ಎಸ್ಪಿ ನಿಲಯಂನಲ್ಲಿ ಕೌಂಟರ್ಗಳು ತೆರೆಯಲಿವೆ.
ಮೈಸೂರು ವಿಭಾಗದಲ್ಲಿ ಮೈಸೂರು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಕೌಂಟರ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.