ಚಿಕ್ಕೋಡಿ: ಅಯೋಧ್ಯೆಯಲ್ಲಿ ಶ್ರೀ ರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಲ್ಲಿ ರಾಮೋತ್ಸವ, ರಾಮಭಜನೆ, ಅನ್ನಪ್ರಸಾದ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಜರುಗಿದವು.
ಪಟ್ಟಣದ ಮಹಾದೇವ ಮಂದಿರ, ಕಾಳಾ ಮಾರುತಿಗಲ್ಲಿ, ಡಂಬಳ ಬಡಾವಣೆಯ ರಾಮ ಮಂದಿರಗಳಲ್ಲಿ ವಿಶೇಷ ಪೂಜೆ ಜತೆಗೆ ಮಹಾಪ್ರಸಾದ ಏರ್ಪಡಿಸಲಾಗಿತ್ತು. ಮಕ್ಕಳು ರಾಮ-ಲಕ್ಷ್ಮಣ, ಹನುಮಾನ ವೇಷಭೂಷಣದಲ್ಲಿ ಕಣ್ಮನ ಸೆಳೆದರು.
ಅಯೋಧ್ಯೆಯಲ್ಲಿನ ಕಾರ್ಯಕ್ರಮ ವೀಕ್ಷಿಸಲು ಪಟ್ಟಣದ ಕೆ.ಸಿ.ರಸ್ತೆಯಲ್ಲಿ ಭವ್ಯವಾದ ಎಲ್ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ಸಾಯಿ ಸೇವಾ ಪರಿವಾರ, ಸಂಪಾದನಾ ಚರಮೂರ್ತಿ ಮಠ, ಪರಟಿ ನಾಗಲಿಂಗೇಶ್ವರ, ಹುದ್ದಾರಗಲ್ಲಿ ಸೇರಿ ವಿವಿಧೆಡೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮುಖಂಡ ಅಜಯ ಜಗದೀಶ ಕವಟಗಿಮಠ ಅವರು ಕಾರ್ಯಕರ್ತರೊಂದಿಗೆ ಮನೆಗಳ ಬೆಳಗಲು ಮೇಣದ ಬತ್ತಿ ಹಾಗೂ ಲಡ್ಡು ವಿತರಿಸಿದರು. ಸಂತೋಷ ಸೊಲ್ಲಾಪುರೆ ಹಾಗೂ ಕಾರ್ಯಕರ್ತರು ಇದ್ದರು.