ನವದೆಹಲಿ: ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಡಳಿತವನ್ನು ಸುಲಭವಾಗಿ ಕಿತ್ತುಕೊಂಡ ರೀತಿಯಲ್ಲಿ ರಾಜಸ್ಥಾನದಲ್ಲಿ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂಬ ಮಾತು ದಟ್ಟವಾಗಿದೆ. ರಾಜಸ್ಥಾನದ ವಿಧಾನಸಭೆಯ ಬಲಾಬಲದ ಅಂಕಿಸಂಖ್ಯೆಗಳು ಇದನ್ನು ಖಚಿತಪಡಿಸುತ್ತವೆ.
ಈ ರಾಜ್ಯದಲ್ಲಿ ಬಹುಮತಕ್ಕೆ ಕನಿಷ್ಠ 101 ಶಾಸಕರ ಬೆಂಬಲ ಅವಶ್ಯಕತೆ ಇದೆ. ಆದರೆ, ಈ ಬಾರಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಕೇವಲ 75 ಸ್ಥಾನ ಗೆದ್ದುಕೊಂಡಿವೆ. ಕನಿಷ್ಠ ಬಹುಮತಕ್ಕೆ ಅಗತ್ಯವಾದ 26 ಶಾಸಕರ ಬೆಂಬಲ ಗಳಿಸುವುದು ಬಿಜೆಪಿಗೆ ಅಷ್ಟು ಸುಲಭದ ಮಾತಲ್ಲ ಎಂದು ಹೇಳಲಾಗುತ್ತಿದೆ.
ಇದೀಗ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿಬಿದ್ದಿರುವ ಡಿಸಿಎಂ ಸಚಿನ್ ಪೈಲಟ್ ತಮಗೆ 30 ಶಾಸಕರ ಬೆಂಬಲ ಇರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಸಂಖ್ಯೆಯ ಬಗ್ಗೆ ಗೊಂದಲ ಮುಂದುವರಿದಿದೆ. ಬಿಜೆಪಿಯ ಪಾಲಿಗೆ ಇದು ಬಹುದೊಡ್ಡ ತೊಡಕಾಗಿ ಪರಿಣಮಿಸಿದೆ.
ರಾಜಕೀಯ ಮುತ್ಸದ್ಧಿ ಎನಿಸಿಕೊಂಡಿರುವ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾದ ನಂತರದಲ್ಲಿ ತಮಗಿದ್ದ ಅತ್ಯಲ್ಪ ಬಹುಮತವನ್ನು ಹಿಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಜೈ ಜವಾನ್ ಜೈ ಕಿಸಾನ್ ಎಂದು ಕೃಷಿಯಲ್ಲಿ ತೊಡಗಿಸಿಕೊಂಡ ಸಲ್ಮಾನ್
ಚುನಾವಣೆ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಕಾಂಗ್ರೆಸ್ಗೂ ಬಹುಮತದ ಕೊರತೆ ಇತ್ತು. ಹಾಗಾಗಿ ಮಾಯಾವತಿ ಅವರ ಬಿಎಸ್ಪಿ ಅನ್ನೇ ತಮ್ಮ ಪಕ್ಷದಲ್ಲಿ ವಿಲೀನಗೊಳಿಸುವಂತೆ ಮಾಡಿ, ತಮ್ಮ ಬಹುಮತವನ್ನು ಹಿಗ್ಗಿಸಿಕೊಂಡರು. ಕಾಂಗ್ರೆಸ್ನ 107 ಶಾಸಕರ ಜತೆಗೆ ಈಗ 13 ಮಂದಿ ಪಕ್ಷೇತರ ಶಾಸಕರು, ಭಾರತೀಯ ಟ್ರೈಬಲ್ ಪಾರ್ಟಿಯ ಇಬ್ಬರು ಮತ್ತು ಆರ್ಎಲ್ಡಿಯ ಒಬ್ಬ ಶಾಸಕರ ಬೆಂಬಲವೂ ಇದೆ. ಇದರಿಂದಾಗಿ ಅವರು ತಮ್ಮ ಸರ್ಕಾರವನ್ನು ಸುಭದ್ರಗೊಳಿಸಿಕೊಂಡಿದ್ದಾರೆ. ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಸಂಕಷ್ಟ ಬಂದೊದುಗುತ್ತದೆ ಎನ್ನುವುದಾದರೆ, ಸಿಪಿಎಂನ ಇಬ್ಬರು ಶಾಸಕರ ಬೆಂಬಲವೂ ಗೆಹ್ಲೋಟ್ಗೆ ದೊರೆಯಲಿದೆ.
ಆದ್ದರಿಂದ, ಸಚಿನ್ ಪೈಲಟ್ ಎಷ್ಟು ಶಾಸಕರನ್ನು ಸೆಳೆದು ತರಲಿದ್ದಾರೆ, ವಸುಂಧರ ರಾಜೆ ಅಂಥ ಪ್ರಭಾವಿ ನಾಯಕರು ಇರುವಾಗ ಪೈಲಟ್ಗೆ ಸಿಎಂ ಸ್ಥಾನವನ್ನು ಕೊಡಲು ಸಾಧ್ಯವೆ ಎಂಬೆಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕಂಡುಕೊಳ್ಳದ ಹೊರತು ಬಿಜೆಪಿಗೆ ಅಧಿಕಾರ ದಕ್ಕುವುದು ಕಷ್ಟ ಕಷ್ಟ ಎನ್ನಲಾಗುತ್ತಿದೆ.
ಕೋವಿಡ್ ಪಾರ್ಟಿ ಅಟೆಂಡ್ ಮಾಡಿ ನಾನು ತಪ್ಪೆಸಗಿದೆ – ಡೆತ್ ಬೆಡ್ನಲ್ಲಿ ಯುವಕನ ಕೊನೇ ಮಾತು