ನವದೆಹಲಿ: ಹೊಸ ವರ್ಷ ಸಂಭ್ರಮ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನು ಹೊರತುಪಡಿಸಿ ನೆರೆಯ 5 ರಾಷ್ಟ್ರಗಳ ನಾಯಕರಿಗೆ ದೂರವಾಣಿ ಕರೆಯ ಮೂಲಕ ಶುಭಕೋರಿದ್ದಾಗಿ ವರದಿಯಾಗಿದೆ.
ದೂರವಾಣಿಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರೊಂದಿಗೆ ಮಾತನಾಡಿರುವ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವೇ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಬಾಂಗ್ಲಾದ ಪಿತಾಮಹ ಶೇಖ್ ಮುಜಿಬರ್ ರೆಹಮಾನ್ ಅವರ ಜನ್ಮಶತಮಾನೋತ್ಸವ ಸಂಬಂಧ ಬೆಳವಣಿಗೆಯ ಸೇತುವೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆಗಳನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ನುಸುಳುಕೋರರನ್ನು ವಾಪಸ್ ಕಳುಹಿಸಲಾಗುತ್ತದೆ ಎಂದು ಕೆಲ ಬಿಜೆಪಿ ನಾಯಕರು ಟಾರ್ಗೆಟ್ ಮಾಡಿ ಮಾತನಾಡಿರುವುದು ಬಾಂಗ್ಲಾ ನಾಯಕರ ಇರಿಸುಮುರಿಸಿಗೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಇತ್ತೀಚೆಗೆ ಮೃತಪಟ್ಟ ಬಾಂಗ್ಲಾದೇಶ ಹೈಕಮಿಷನರ್ ನಿಧನಕ್ಕೂ ಮೋದಿ ಸಂತಾಪ ಸೂಚಿಸಿದ್ದಾರೆ.
ಭೂತಾನ್ ರಾಜ ಜಿಗ್ಮೆ ಖೇಸರ್ ನ್ಯಾಮ್ಗೆಲ್ ವಾಂಗ್ಚುಕ್ಗೂ ಪ್ರಧಾನಿ ಮೋದಿ ಹೊಸ ವರ್ಷದ ಶುಭಕೋರಿದ್ದಾರೆ. ಈ ವೇಳೆ ಕಳೆದ ವರ್ಷ ಸಂಬಂಧ ವೃದ್ಧಿಯಲ್ಲಿ ಉಭಯ ದೇಶಗಳ ಸಾಧನೆಯನ್ನು ವಿವರಿಸಿದ್ದಾರೆ. ಇದೇ ಯುವ ಜನಾಂಗದ ಬಗ್ಗೆ ಮಾತನಾಡಿ, ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ರಾಜ ಮಾತ್ರವಲ್ಲದೆ, ಭೂತಾನ್ ಪ್ರಧಾನಿ ಲೊಟಾಯ್ ತ್ಸೆರಿಂಗ್ಕೂ ಶುಭ ಹಾರೈಸಿದ್ದಾರೆ.
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರಿಗೆ ಕರೆಮಾಡಿ ಶುಭಕೋರಿದ ಪ್ರಧಾನಿ ಮೋದಿ, ಹಲವು ಯೋಜನೆಗಳು ಪೂರ್ಣಗೊಂಡಿದ್ದರ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮೊತಿಹಾರಿ-ಅಮ್ಲೆಖ್ಗುಂಜ್ ಪೆಟ್ರೋಲಿಯಂ ಪ್ರಾಡಕ್ಟ್ ಪೈಪ್ಲೈನ್ ಯೋಜನೆ ಬಗ್ಗೆ ಹೆಚ್ಚು ಮಾತನಾಡಿದ್ದು, ಶೀಘ್ರ ಉದ್ಘಾಟನೆ ಬಗ್ಗೆಯೂ ಚರ್ಚಿಸಿದ್ದಾರೆ.
ಇತ್ತೀಚೆಗಷ್ಟೇ ಶ್ರೀಲಂಕಾದ ಅಧ್ಯಕ್ಷರಾದ ಗೋತಬಯ ರಾಜಪಕ್ಸರಿಗೂ ಫೋನ್ ಮಾಡಿ ಪ್ರಧಾನಿ ಶುಭಕೋರಿದ್ದಾರೆ. ಸ್ನೇಹ ಒಪ್ಪಂದಗಳ ಮೂಲಕ 2020ರಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ವೃದ್ಧಿಸಲು ಶ್ರಮಿಸುವುದಾಗಿ ಪರಸ್ಪರ ಮಾತನಾಡಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹಾರಿಗೂ ಶುಭಕೋರಿ, ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ. (ಏಜೆನ್ಸೀಸ್)