ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೋವಿಡ್-19 ಹಾವಳಿ ಜೋರಾಗಿದೆ. ಇದನ್ನು ತಡೆಗಟ್ಟಲು ಮತ್ತೊಮ್ಮೆ ಲಾಕ್ಡೌನ್ ಮಾಡುವುದಿಲ್ಲ. ಬದಲಿಗೆ ಸೀಲ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಅನ್ಲಾಕ್ 1.0 ಪ್ರಕಾರ ಮಾಲ್ಗಳು, ಅಂಗಡಿಮುಂಗಟ್ಟುಗಳು, ಬ್ಯಾಂಕ್ಗಳು, ಹೋಟೆಲ್ ಮತ್ತಿತರ ಸಂಸ್ಥೆಗಳ ಅನಿರ್ಬಂಧಿತ ಕಾರ್ಯಾಚರಣೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಅನ್ಲಾಕ್ 1.0 ಪ್ರಕಾರ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಕೈ ಸ್ವಚ್ಛಗೊಳಿಸಲು ಸ್ಯಾನಿಟೈಸರ್ಗಳನ್ನು ವ್ಯವಸ್ಥೆಗೊಳಿಸುವುದು ಸೇರಿ ನಾನಾ ಬಗೆಯ ಸುರಕ್ಷತಾ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುವವರಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು 200 ರೂಪಾಯಿ ದಂಡವನ್ನೂ ವಿಧಿಸುತ್ತಿದ್ದಾರೆ.
ಇದನ್ನೂ ಓದಿ: ಮುಂದುವರಿದ ಕರೊನಿಲ್ ವಿವಾದ; ಯೋಗಗುರು ಬಾಬಾ ರಾಮ್ದೇವ್ ಸೇರಿ ಐವರ ವಿರುದ್ಧ ಎಫ್ಐಆರ್
ಇಷ್ಟಾಗಿಯೂ ಹಲವು ಸ್ಥಳಗಳಲ್ಲಿ ಕೋವಿಡ್-19 ನಿಯಂತ್ರಣದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ, ಬ್ಯಾಂಕ್, ಕಚೇರಿ, ಮಾಲ್ಗಳು ಸೇರಿ ಎಲ್ಲ ಸಂಸ್ಥೆಗಳಿಗೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಅಂಥ ಸಂಸ್ಥೆಗಳ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಇಡಲಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ರಾವ್ ಎಚ್ಚರಿಕೆ ನೀಡಿದ್ದಾರೆ.
Shops,Malls,Banks,Hotels,Offices,and Establishments.All of you are already aware of precautions to be taken.If you do not implement mask wearing and ensure safe distance,CityPolice will raid and initiate legal action, this has already started,it’s is in Public Interest.
— Bhaskar Rao IPS (@deepolice12) June 27, 2020
ಈ ಬಗ್ಗೆ ಶನಿವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅವರು, ಪೊಲೀಸರು ದಾಳಿ ಮಾಡಿದ ಬಳಿಕ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಈಗಾಗಲೆ ಕೆಲವು ಕಡೆ ದಾಳಿಗಳನ್ನು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ದಾಳಿಗಳನ್ನು ತೀವ್ರಗೊಳಿಸಲಾಗುವುದು. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಇಂಥ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
16ರ ಬಾಲಕಿಗೆ ಲವ್ ಲೆಟರ್ ಕೊಟ್ಟ 66ರ ವೃದ್ಧ: ಎಚ್ಚರಿಸಿದ್ರೂ ಸುಮ್ಮನಾಗದ ಆತ ಮಾಡಿದ್ದೇನು?