ಉಡುಪಿ: ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮ, ಇಂಬ್ರಗೋಳಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ನಾಲ್ಕು ಲಾರಿ, ಹಿಟಾಚಿ ಸಹಿತ ಮೂರು ಕಾರುಗಳನ್ನು ವಶಪಡಿಸಿಕೊಂಡಿದೆ.
ಇಲ್ಲಿನ ಮಡಿಸಾಲ್ ಹೊಳೆಯ ಪಕ್ಕದ ಗದ್ದೆಯೊಂದರ ಬಳಿ ಅಕ್ರಮವಾಗಿ ಹಿಟಾಚಿ ಬಳಸಿ ಕೆಸರನ್ನು ಮೇಲಕ್ಕೆ ಎತ್ತಿ ಸಂಸ್ಕರಣೆಗೊಳಿಸಿ ಎರಡು ಮೆಟ್ರಿಕ್ ಟನ್ನಷ್ಟು ಮರಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟಿದ್ದರು. ಕೆಲವು ದಿನಗಳಿಂದ ಇಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧಿಸಿ ಮಾಹಿತಿ ಪಡೆದ ಗಣಿ ಇಲಾಖೆ ಅಧಿಕಾರಿಗಳ ತಂಡ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್ ಅವರಿಗೆ ಮಾಹಿತಿ ನೀಡಿ ಗುರುವಾರ ರಾತ್ರಿ 11.30ಕ್ಕೆ ಸ್ಥಳಕ್ಕೆ ತೆರಳಿದ್ದಾರೆ. ಎರಡು ಮೆಟ್ರಿಕ್ ಟನ್ ಮರಳನ್ನು ಬೇರೆಡೆ ಸಂಗ್ರಹಿಸಿಟ್ಟಿದ್ದು, ಮರಳು ಮತ್ತು ಅಕ್ರಮ ಮರಳುಗಾರಿಕೆ ಬಳಸಿದ್ದ ಹಿಟಾಚಿ ಯಂತ್ರ. ಸಂಗ್ರಹಿಸಿದ ಮರಳು ತುಂಬಿಸಲು ಸ್ಥಳದಲ್ಲಿದ್ದ 4 ಲಾರಿ, ಮೂರು ಕಾರುಗಳನ್ನು ವಶಕ್ಕೆ ಪಡೆದಿದ್ದೇವೆ.
ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದವರು ದಾಳಿವೇಳೆ ಪಕ್ಕದ ಹೊಳೆಗೆ ಹಾರಿ ಈಜಿ ಪರಾರಿಯಾಗಿದ್ದಾರೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗಣಿ ಇಲಾಖೆ ಹಿರಿಯ ಭೂವಿಜ್ಞಾನಿ ರಾಂಜಿ ನಾಯ್ಕ, ಭೂ ವಿಜ್ಞಾನಿಗಳಾದ ಗೌತಮ್ ಶಾಸ್ತ್ರಿ, ಸಂಧ್ಯಾ ಕುಮಾರಿ, ಹಾಜಿರ ಸಜನಿ ಕಾರ್ಯಚರಣೆಯಲ್ಲಿದ್ದರು. ಎಎಸ್ಪಿ ಹರಿರಾಮ್ ಶಂಕರ್, ಬ್ರಹ್ಮಾವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.