ಕೊಕಟನೂರ: ಅನ್ನಭಾಗ್ಯ ಪಡಿತರ ಅಕ್ಕಿಯನ್ನು ನೆರೆಯ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಜಾಲ ಭೇದಿಸಿರುವ ಅಥಣಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಓರ್ವನನ್ನು ಬಂಧಿಸಿ, ಅಕ್ಕಿ ವಶಪಡಿಸಿಕೊಂಡಿದ್ದಾರೆ. ಅಥಣಿ ತಾಲೂಕಿನ ಖೋತನಹಟ್ಟಿ ಗ್ರಾಮದ ಶಂಕರ ಶಿವಪ್ಪ ಭಜಂತ್ರಿ ಬಂಧಿತ. ಜಮಖಂಡಿ ಕಡೆಯಿಂದ ಐಗಳಿ ಕ್ರಾಸ್ ಮಾರ್ಗವಾಗಿ ಮದಬಾವಿ ಮೂಲಕ ಅಕ್ಕಿ ಮೂಟೆ ತುಂಬಿದ್ದ ವಾಹನ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು. ಅಥಣಿ ಪಿಎಸ್ಐ ಕುಮಾರ ಹಾಡಕರ, ತಾಲೂಕು ಆಹಾರ ನಿರೀಕ್ಷಕ ಶರಣಪ್ಪ ಬಾಗೇವಾಡಿ ಮತ್ತು ತಂಡ ಜಂಟಿಯಾಗಿ ದಾಳಿ ನಡೆಸಿ ವಾಹನದಲ್ಲಿದ್ದ ತಲಾ 50 ಕೆಜಿ ಇದ್ದ 24 ಚೀಲ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.