ವಿಜಯಪುರ: ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂಡಳಿಯ ಲೆಕ್ಕ ಅಧೀಕ್ಷಕ ಎಂ.ಎಸ್. ಮದ್ದಾನಿಮಠ ಹಾಗೂ ಎಇಇ ಜೆ.ಎಸ್. ಸಾಲಿಮಠ ಬಂಧಿತ ಆರೋಪಿಗಳು. ಶುಕ್ರವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾಕ್ಷೃ ಸಮೇತ ಸಿಕ್ಕಿ ಬಿದ್ದಿದ್ದಾರೆ.
ಘಟನೆ ವಿವರ
ಲಕ್ಷ್ಮೀ ಎಂಟರ್ ಪ್ರೈಸಸ್ನ ಗುತ್ತಿಗೆದಾರ ಅಶೋಕ ಪಾಟೀಲ ಎಂಬುವರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಪೂರೈಸಿದ್ದಾರೆ. ಫೆ. 2020ಕ್ಕೆ ಸಂಬಂಧಿಸಿದಂತೆ 50 ಲಕ್ಷ ರೂ. ಬಿಲ್ ಪಾವತಿ ಮಾಡಬೇಕಿತ್ತು. ಆದರೆ, ಈ ಬಿಲ್ ಪಾವತಿ ಮಾಡಲು ಮದ್ದಾನಿಮಠ 50 ಸಾವಿರ ರೂ. ಗೆ ಬೇಡಿಕೆ ಇರಿಸಿದ್ದರು. ಎಇಇ ಸಾಲಿಮಠ ಬಿಲ್ ಮಂಜೂರಿಸಲು 20 ಸಾವಿರ ರೂ. ಲಂಚ ಕೇಳಿದ್ದರು.
ಅಧಿಕಾರಿಗಳ ವರ್ತನೆಯಿಂದ ಬೇಸತ್ತಿದ್ದ ಅಶೋಕ ಪಾಟೀಲ ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಎಸ್ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಎಲ್.ವೇಣುಗೋಪಾಲ ನೇತೃತ್ವದ ಎಸಿಬಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. 70ಸಾವಿರ ಲಂಚದ ಹಣ ಹಾಗೂ 104300 ರೂ. ಲೆಕ್ಕ ನೀಡದ ಹಣ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ನಿರೀಕ್ಷಕರಾದ ಹರಿಶ್ಚಂದ್ರ, ಎಸ್.ಆರ್. ಗಣಾಚಾರಿ, ಸಿಬ್ಬಂದಿ ಮಹೇಶ ಪೂಜಾರಿ, ಸುರೇಶ ಜಾಲಗೇರಿ, ಅಶೋಕ ಸಿಂಧೂರ, ಈರಣ್ಣ ಕನ್ನೂರ, ಮದನಸಿಂಗ್ ರಜಪೂತ ಕಾರ್ಯಾಚರಣೆಯಲ್ಲಿದ್ದರು.