ಶಿವಮೊಗ್ಗ: ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿದ್ದಾಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳಿವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜ ಎನಿಸಿಕೊಳ್ಳಲು ಅರ್ಹನಲ್ಲ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.
ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿದ್ವತ್ ಸಭೆಯಲ್ಲಿ ಶ್ರೀಗಳು, ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನ ಆಧಾರಿತ ಅನುಗ್ರಹ ಸಂದೇಶ ನೀಡಿದರು. ನಾವು ತಪ್ಪು ದಾರಿಯಲ್ಲಿದ್ದಾಗ ನಮಗೆ ಸನ್ಮಾರ್ಗದ ಬೋಧನೆ ಮಾಡಬೇಕು. ಅದು ಬಿಟ್ಟು ನೀನು ಮಾಡಿದ್ದೇ ಸರಿ. ನಿನ್ನ ಇಷ್ಟಕ್ಕೆ ಬಂದಂತೆ ಇರು. ಬಂದ ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನನ್ನ ಬಳಿ ಬೇಕಾದಷ್ಟು ಸಂಪತ್ತಿದೆ ಎಂದು ಪೋಷಿಸಿದರೆ ಅದು ಅನರ್ಥಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ವ್ಯಕ್ತಿಯನ್ನು ಮೆಚ್ಚಿಸಲು ಆತ ಮಾಡಿದ್ದನ್ನೆಲ್ಲ ಸರಿ ಎನ್ನಬಾರದು. ನಾವು ತಪ್ಪು ಮಾಡಿದಾಗ ತಿದ್ದುವ ಮತ್ತು ಶಾಸವಿಹಿತವಾಗಿ ಬದುಕಿದಾಗ ಪೊರೆವ ಭಗವಂತನೇ ನಮಗೆ ಸರಿಯಾದ ಗುರು ಎನಿಸಿದ್ದಾನೆ. ಇಂತಹ ಭಗವಂತ ಎಲ್ಲರ ಹೃದಯದಲ್ಲಿದ್ದಾನೆ. ಹೀಗಿರುವಾಗ ಯಾರೂ ಬಡವರಲ್ಲ, ದುರ್ಬಲರಲ್ಲ. ಕಷ್ಟ ಬಂದಾಗ ಒಳಗಿರುವ ಪರಮಾತ್ಮನನ್ನು ಎಬ್ಬಿಸಿ ಅವನಿಗೆ ಶರಣು ಹೋಗಿ. ಅನಂತ ಜೀವರಾಶಿಯಲ್ಲಿದ್ದೂ ಅವರ ಯೋಗಕ್ಷೇಮ ನೋಡುವಾತ ಭಗವಂತನೊಬ್ಬನೇ ಎಂದು ತಿಳಿಸಿದರು.