ಮುಂಬೈ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲುವುದು ಗ್ಯಾರಂಟಿ ಎಂದು ಶಿವಸೇನೆ ನಾಯಕ(ಉದ್ಧವ್ ಠಾಕ್ರೆ ಬಣ), ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಭವಿಷ್ಯ ನುಡಿದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದು, ಈ ನಿಟ್ಟಿನಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಅವರು ಸ್ಪರ್ಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದಲ್ಲದೆ ರಾಯ್ಬರೇಲಿ, ಅಮೇಥಿಯಲ್ಲೂ ಸಹ ಬಿಜೆಪಿಗೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹಾಗೂ ಎನ್ಸಿಪಿ ವರಿಷ್ಠ ಶರದ್ ಪವಾರ್ ಗುಪ್ತ ಸಭೆ ಕುರಿತು ಪ್ರತಿಕ್ರಿಯಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಬಹುದು. ಆದರೆ, ಇವರಿಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದರೆ ಏನು ತೊಂದರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: VIDEO| ಭಾರಿ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ; ಭೂ ಕುಸಿತದಿಂದಾಗಿ 21 ಮಂದಿ ಮೃತ್ಯು
ಶರದ್ ಪವಾರ್ ಹಾಗೂ ಅಜಿತ್ ಅವರ ಭೇಟಿ ಸುದ್ದಿಯನ್ನೂ ನಾನು ಟಿವಿಯಲ್ಲಿ ನೋಡಿದ್ದೇನೆ. ಶೀಘ್ರದಲ್ಲೇ ಈ ಕುರಿತು ಸ್ವತಃ ಶರದ್ ಪವಾರ್ ಅವರೇ ಸ್ಪಷ್ಟನೆ ನೀಡಲಿದ್ದಾರೆ. ಆಗಸ್ಟ್ 31 ಹಾಗೂ ಸೆಪ್ಟೆಂಬರ್ 01ರಂದು ಮುಂಬೈನಲ್ಲಿ ನಡೆಯಲಿರುವ ವಿಪಕ್ಷಗಳ ಒಕ್ಕೂಟ ಸಭೆಗೆ ಆಹ್ವಾನಿಸಲು ಭೇಟಿಯಾಗಿರಬಹುದು. ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ಬಗ್ಗೆ ಇಬ್ಬರು ಡಿಸಿಎಂಗಳಾದ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ಗೆ ಅತೃಪ್ತಿ ಹೊಂದಿದ್ದು, ಮುಂದಿನ ಕೆಲ ದಿನಗಳಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆಯಲಿದೆ ಕಾದು ನೋಡಿ ಎಂದು ಶಿವಸೇನೆ ನಾಯಕ(ಉದ್ಧವ್ ಠಾಕ್ರೆ ಬಣ), ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.