ಬೆಳ್ಮಣ್: ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ದೂರ ಸರಿಯುವವರೇ ಜಾಸ್ತಿ. ಆದರೆ ಬೆಳ್ಮಣ್ನ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯರ ಸೇವೆ ಸರ್ಕಾರಿ ವ್ಯವಸ್ಥೆಗೇ ಮಾದರಿಯಾಗಿದೆ.
ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವೈದ್ಯರು ರೋಗಿಗಳ ಸಮಸ್ಯೆಗೆ ಸ್ಪಂದಿಸುತ್ತಿದ್ದು, ಸ್ಥಳೀಯ ರೋಗಿಗಳು ಖಾಸಗಿ ಆಸ್ಪತ್ರೆ ಬದಲು ಸರ್ಕಾರಿ ಆಸ್ಪತ್ರೆಯನ್ನೇ ನೆಚ್ಚಿಕೊಂಡಿದ್ದಾರೆ.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಾಲಕೃಷ್ಣ ರಾವ್(ಬಿ.ಬಿ.ರಾವ್) ಕಳೆದ ಹತ್ತು ತಿಂಗಳಿಂದ ಇಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಬಂದ ಬಳಿಕ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಲಭಿಸುತ್ತಿದೆ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬರುತ್ತಿವೆ. ಅವರ ಸೇವೆ ಪರಿಗಣಿಸಿ 2017ರಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಪ್ರಸಕ್ತ ಬೆಳ್ಮಣ್ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಮಾತ್ರವಲ್ಲದೆ ಪಡುಬಿದ್ರಿ, ನಂದಿಕೂರು , ಸಚ್ಚೇರಿಪೇಟೆ, ಮುಂಡ್ಕೂರು ಹಾಗೂ ಸುರತ್ಕಲ್ ಭಾಗದಿಂದಲೂ ರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ವಚ್ಛತೆಗೆ ಆದ್ಯತೆ: ಸರ್ಕಾರಿ ಆಸ್ಪತ್ರೆಯಾದರೂ ಸ್ವಚ್ಛತೆಗೆ ಇಲ್ಲಿ ಆದ್ಯತೆ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲೂ ಇಲ್ಲಿನ ವೈದ್ಯರ ತಂಡ ಉತ್ತಮ ಸೇವೆ ನೀಡಿದ್ದು , ಪ್ರಸಕ್ತ ಲಸಿಕೆ ವಿತರಣೆಯಲ್ಲೂ ವಿಶೇಷ ಕಾಳಜಿ ತೋರಿದ್ದಾರೆ.
ಸ್ಥಳೀಯರ ಹಾಗೂ ಇಲ್ಲಿ ಬರುವ ರೋಗಿಗಳ ಸಹಕಾರದಿಂದ ಉತ್ತಮ ಸೇ ೆನೀಡಲು ಸಾಧ್ಯವಾಗುತ್ತದೆ. ಆರೋಗ್ಯ ಕೇಂದ್ರದ ಸಿಬ್ಬಂದಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
-ಡಾ.ಬಿ.ಬಾಲಕೃಷ್ಣ ರಾವ್. ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು
ಇಲ್ಲಿನ ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಉತ್ತಮ ಸೇವೆಯಿಂದ ಖುಷಿಯಾಗಿದೆ. ವೈದ್ಯರು ರೋಗಿಗಳಿಗೆ ಉತ್ತಮ ಸಲಹೆ, ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ವೈದ್ಯರು ನಮ್ಮ ಗ್ರಾಮಕ್ಕೆ ಬಂದದ್ದು ಪುಣ್ಯ.
-ಗೀತಾ, ಗ್ರಾಮಸ್ಥೆ.ಸರ್ಕಾರಿ ಆಸ್ಪತ್ರೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಬೆಳ್ಮಣ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸೇವೆ ಖಾಸಗಿ ಆಸ್ಪತ್ರೆಗಿಂತ ಉತ್ತಮವಾಗಿದೆ. ನಿತ್ಯ ನೂರಾರು ರೋಗಿಗಳು ವೈದ್ಯರ ಸೇವೆ ಪಡೆಯುತ್ತಿದ್ದಾರೆ.
-ಮಲ್ಲಿಕಾ, ಗ್ರಾಮಸ್ಥೆ.