ಧಾರವಾಡ: ಗರ್ಭಿಣಿಯರ ಆರೋಗ್ಯ ಅವರ ಕೈಯಲ್ಲಿದೆ. ಆರೋಗ್ಯ ಕಾಪಾಡಿಕೊಂಡರೆ ಜನಿಸುವ ಮಕ್ಕಳೂ ಆರೋಗ್ಯವಂತರಾಗಿರುತ್ತಾರೆ. ದಿನನಿತ್ಯ ಎದುರಾಗುವ ಒತ್ತಡ ನಿಯಂತ್ರಿಸಿಕೊಂಡು ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ಕೊಡಬೇಕು ಎಂದು ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.
ನಗರದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಗರ್ಭಿಣಿಯರಿಗೆ ಹೈಜಿನ್ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯು ಆರೋಗ್ಯ ದೃಷ್ಟಿಯಿಂದ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದೆ. ಕರೊನಾ ನಮಗೆಲ್ಲ ಸ್ವಚ್ಛತೆಯ ಪಾಠ ಕಲಿಸಿಕೊಟ್ಟಿದೆ. ಆದರೂ ನಾವು ಇನ್ನೂ ಪಾಠ ಕಲಿತಿಲ್ಲ. ಹೆಣ್ಣು ಮಕ್ಕಳಿಗೆ ಇಂದಿನ ಜೀವನ ಜಂಜಾಟದಲ್ಲಿ ಸಮಯದ ಅಭಾವ ಎದುರಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ವೀರಾಪೂರ ಮಾತನಾಡಿ, ಗರ್ಭಿಣಿಯರ ಆರೋಗ್ಯಕ್ಕಾಗಿ ಸಂಸ್ಥೆ ನೀಡಿದ ಆರೋಗ್ಯ ಕಿಟ್ಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಾ. ಉಮೇಶ ಹಳ್ಳಿಗೇರಿ, ಅರವಿಂದ ಏಗನಗೌಡರ, ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ, ಬಿ.ಆರ್. ಸಾರಥಿ, ಗಂಗಾಧರ ಕಮ್ಮಾರ, ಜ್ಯೋತಿ ಉಡುಪಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ಇದ್ದರು.