ಹೂವಿನಹಿಪ್ಪರಗಿ: ಮಕ್ಕಳ ಭವಿಷ್ಯ ರೂಪಿಸುವ ಪಟ್ಟಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ ಹಾಗೂ ಮಾನವೀಯ ಮೌಲ್ಯ ಬಿತ್ತಿ, ರಾಷ್ಟ್ರದ ಭವಿಷ್ಯ ಬೆಳಗಿಸುವಂತಹ ಸುಸಂಸ್ಕೃತ ವಿದ್ಯಾರ್ಥಿಗಳನ್ನು ನಿರ್ಮಿಸುವ ಶಿಕ್ಷಕರೇ ಈ ದೇಶದ ಅಭಿವೃದ್ಧಿಯ ಹರಿಕಾರರು ಎಂದು ಶಿಕ್ಷಣ ಸಂಯೋಜಕ ಎಸ್.ಬಿ. ನಿಂಗರೆಡ್ಡಿ ಹೇಳಿದರು.
ಸಮೀಪದ ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉರ್ದು ಹಾಗೂ ಕನ್ನಡ ಶಾಲೆಯವರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಗುವಿನ ಭವಿಷ್ಯದ ಕನಸಿಗೆ ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ರೋಗಗಳ ರೀತಿಯ ಅಡಚಣೆಗಳು ಅಡ್ಡಿಯಾಗದಂತೆ ನನಸಾಗಿಸುವ ದೂರದೃಷ್ಟಿಯೊಂದಿಗೆ ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಕೋವಿಡ್- 19 ಪರಿಣಾಮದ ಬದಲಾದ ಸನ್ನಿವೇಶದಲ್ಲಿ ‘ವಿದ್ಯಾಗಮ’ ಕಾರ್ಯಕ್ರಮ ಶಿಕ್ಷಣ ಲೋಕದಲ್ಲಿ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ನೈತಿಕ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವ ಜತೆಗೆ ನಿರಂತರ ಕಲಿಕೆಗೆ ಸಹಾಯ ಮಾಡುವ ಅಭಿಪ್ರೇರಣೆ ಕಾರ್ಯಕ್ರಮ ಇದಾಗಿದೆ ಎಂದರು.
ಬಸವನ ಬಾಗೇವಾಡಿ ತಾಲೂಕಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ರಾಜನಾಳ, ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಎಂ.ಎಚ್. ಬಡಗೇರ, ಹೂವಿನಹಿಪ್ಪರಗಿ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪಿ. ಆರ್. ಮೆಂಚ ಅವರನ್ನು ಸನ್ಮಾನಿಸಲಾಯಿತು.
ಉರ್ದು ಶಾಲೆಯ ಮುಖ್ಯಗುರು ಎಸ್.ಎಸ್. ಶಿವಣಗಿ, ಶಿಕ್ಷಕರಾದ ಎಂ. ಎಸ್. ಅವಟಿ, ಸಿ. ಸಿ. ಕಮತ, ಆರ್. ಜಿ. ವಪ್ಪಾರಿ, ಎಂ. ಬಿ. ಪತ್ತಾರ, ಪಿ. ಸಿ. ಅಸ್ಕಿ, ಎ. ಎಂ. ಸಗರನಾಳ, ಜಿ.ಬಿ. ಪೊದ್ದಾರ, ರಾಜು ಹುಲಸೂರ, ತಿಪ್ಪಣ್ಣ ನಾಟಿಕಾರ, ಆರ್. ಬಿ. ಪಾಟೀಲ, ಪಿ. ಎಸ್. ಬಸರಕೋಡ ಸೇರಿ ವಲಯದ ಶಿಕ್ಷಕರು ಉಪಸ್ಥಿತರಿದ್ದರು.