ಹೂವಿನಹಿಪ್ಪರಗಿ: ಗ್ರಾಮದ ಶಾಲೆಯನ್ನು ಮುಂಬರುವ ದಿನಗಳಲ್ಲಿ ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡಲಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರು ಶ್ರಮಿಸಬೇಕೆಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ಸಮೀಪದ ಹುಣಶ್ಯಾಳ ಪಿ.ಬಿ. ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ಕಾರಿ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಪುನಃ ನಾಮಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಸಮುದಾಯ ಭವನ, ಸಿಸಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಲಕ್ಕಮ್ಮ ದೇವಸ್ಥಾನದ ರಸ್ತೆಯನ್ನು ಡಾಂಬರೀಕರಣ ಮಾಡಿಸಲಾಗುವುದು. ಹನುಮಂತ ದೇವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ನೀಡಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.
ಬಿಇಒ ಬಸವರಾಜ ತಳವಾರ ಮಾತನಾಡಿ, ಮಕ್ಕಳಲ್ಲಿ ಕರೊನಾ ಭಯ ಬೇಡ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸೃಷ್ಟಿಸುವ ಶಾಲೆಯೂ ಜೀವಂತ ದೇವಾಲಯವಿದ್ದಂತೆ ಎಂದರು. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮದ ಶಾಲೆಯು ತಾಲೂಕಿನಲ್ಲಿಯೇ ಮಾದರಿ ಶಾಲೆಯಾಗಬೇಕು. ಕನ್ನಡ ಶಾಲೆಯ ಬಗ್ಗೆ ಅಸಡ್ಡೆ ತಾಳದೆ ಗ್ರಾಮದ ಶಾಲೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಕರು ಆಂತರಿಕ ಕಚ್ಚಾಟದಲ್ಲಿ ತೊಡಗದೆ ಒಗ್ಗಟ್ಟಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದರು. ಡಿವೈಎಸ್ಪಿ ಶಾಂತವೀರ, ಗುಂಡಣ್ಣ ಶಾಸೀ ಮಾತನಾಡಿದರು.
ಶಾಂತಯ್ಯ ಹಿರೇಮಠ, ಪ್ರಥಮ ದರ್ಜೆ ಗುತ್ತಿಗೆದಾರ ಶರಣು ಆಲೂರ, ಎಸ್ಡಿಎಂಸಿ ಅಧ್ಯಕ್ಷರಾದ ಪ್ರಭು ಆಲೂರ, ಚನ್ನು ಅಳಗುಂಡಗಿ, ತಾಪಂ ಉಪಾಧ್ಯಕ್ಷೆ ಸುಜಾತಾ ಪಾಟೀಲ, ಜಿಪಂ ಅಧಿಕಾರಿ ಪಿ.ಎಚ್. ಬಂಡಿ, ತಾಪಂ ಅಧಿಕಾರಿ ಭಾರತಿ ಚಲುವಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು. ರಾಠೋಡ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್. ಲಮಾಣಿ, ಡಾ.ಎಂ.ಎನ್. ಬಿರಾದಾರ, ಎಸ್.ಐ. ನಿಂಗರೆಡ್ಡಿ, ಪಿ.ಎಂ. ಜಾನಕರ, ಎಂ.ಆರ್. ರಾಜನಾಳ, ಎಂ.ವಿ. ಗಬ್ಬೂರ, ಎಸ್.ಆರ್. ಚಿಕರೆಡ್ಡಿ, ಶ್ರೀದೇವಿ ಬೆಳ್ಳಕ್ಕಿ, ಸಿ. ಸಿ. ಕಮತ, ಎಸ್. ಎಸ್. ಶಿವಣಗಿ ಮತ್ತಿತರರಿದ್ದರು.
ಶಿವಪುತ್ರ ಹೆಬ್ಬಾಳ ಸ್ವಾಗತಿಸಿದರು. ಎಸ್.ಬಿ. ಬಾಗೇವಾಡಿ ನಿರೂಪಿಸಿದರು. ಇದೇ ವೇಳೆ ಕರೊನಾ ಸೇನಾನಿಗಳಿಗೆ ಸನ್ಮಾನ ಮಾಡಿದರು.