ಬಂಟ್ವಾಳ: ಕುಡಿದ ಮತ್ತಿನಲ್ಲಿ ಗಂಡ ಹೆಂಡಿರ ನಡುವೆ ಜಗಳ ನಡೆದು ಪತ್ನಿ ಪತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಬಂಟ್ವಾಳದ ನಾವೂರು ಗ್ರಾಮದ ಸುರ ಕ್ವಾಟ್ರರ್ಸ್ನಲ್ಲಿ ವಾಸವಾಗಿದ್ದ ಸೇಸಪ್ಪ ಪೂಜಾರಿ (60) ಕೊಲೆಗೀಡಾದವರು.
ಸೇಸಪ್ಪ ಕೂಲಿ ಕಾರ್ಮಿಕರಾಗಿದ್ದು, ಪ್ರತಿದಿನ ಗಂಡ ಹೆಂಡತಿ ಕುಡಿದು ಗಲಾಟೆ ಮಾಡುತ್ತಿದ್ದರು. ಬುಧವಾರ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಉಮಾವತಿ ಸೇಸಪ್ಪ ಪೂಜಾರಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದರು. ಪುತ್ರಿ ಜಗಳ ಬಿಡಿಸಿದ್ದಳು. ಪತ್ನಿ ಕತ್ತಿಯಿಂದ ಕಡಿದ ಪರಿಣಾಮ ಸೇಸಪ್ಪ ಅವರ ಹಣೆಗೆ ಗಾಯವಾಗಿತ್ತು. ಗಾಯ ಉಲ್ಬಣಗೊಂಡು ರಕ್ತ ಸೋರುತ್ತಿದ್ದರೂ ಚಿಕಿತ್ಸೆ ಪಡೆಯದೆ ಇದ್ದುದರಿಂದ ಹೆಚ್ಚಿನ ರಕ್ತಸ್ರಾವ ಉಂಟಾಗಿ ಶುಕ್ರವಾರ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಆರೋಪಿ ಉಮಾವತಿಯನ್ನು ಪೊಲೀಸರು ಬಂಧಿಸಿದ್ದಾರೆ.