ಮಧುರೈ: ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತ್ನಿ ತನ್ನ ಪತಿಯ ಗುಪ್ತಾಂಗಗಳನ್ನು ಕೊಯ್ಯುವ ಜತೆಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.
ಮಧುರೈ ಬಳಿಯ ತಿರುಮಂಗಲಂ ನಿವಾಸಿ ಇ. ಸುಂದರ್ ಅಲಿಯಾಸ್ ಸುಧೀರ್ (34) ಹತ್ಯೆಯಾದವ. ಸರ್ಕಾರಿ ಶಾಲೆಯ ಶಿಕ್ಷಕಿ ಎಸ್. ಅರಿವುಸೆಲ್ವಂ ಹತ್ಯೆ ಮಾಡಿದಾಕೆ. ಇಂಜಿನಿಯರಿಂಗ್ ಪದವೀಧರನಾಗಿದ್ದ ಸುಧೀರ್ ಭೂಮಾಪನ ಅಧಿಕಾರಿಗಳಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸುಧೀರ್ ಮತ್ತು ಅರಿವುಸೆಲ್ವಂ 8 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಒಬ್ಬ ಪುತ್ರಿಯೂ ಇದ್ದಾಳೆ.
ಶುಕ್ರವಾರ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಧೀರ್ನನ್ನು ಆಸ್ಪತ್ರೆಗೆ ಕರೆದೊಯ್ದ ಅರಿವುಸೆಲ್ವಂ, ಹಾಸಿಗೆಯಿಂದ ಕೆಳಗೆ ಬಿದ್ದಿದ್ದರಿಂದ ಪ್ರಜ್ಞೆ ತಪ್ಪಿಸುವುದಾಗಿ ಹೇಳಿದ್ದಳು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಅದಾಗಲೇ ಸತ್ತು ತುಂಬಾ ಹೊತ್ತಾಗಿರುವುದಾಗಿ ಹೇಳಿದ್ದರು.
ಇದನ್ನೂ ಓದಿ: ನಾಲ್ವರ ಮೇಲೆ ಐಷಾರಾಮಿ ಕಾರು ಹರಿಸಿದಳು, ಕೇಳಿದ್ದಕ್ಕೆ ನಾಯಿ ಕಾರಣ ಎಂದಳು
ವಿಷಯ ತಿಳಿದ ತಿರುಮಂಗಲಂ ಪೊಲೀಸರು ಆಸ್ಪತ್ರೆಗೆ ಬಂದಿದ್ದರು. ಇದು ಹಾಸಿಗೆಯಿಂದ ಬಿದ್ದು ಆಗಿರುವ ಸಾವಲ್ಲ ಎಂಬ ಶಂಕೆಯಲ್ಲಿ ಸುಧೀರ್ನ ಶವವನ್ನು ಸಂಪೂರ್ಣ ಪರಿಶೀಲಸಿದ್ದರು. ಆಗ ಆತನ ಗುಪ್ತಾಂಗಗಳ ಮೇಲೆ ಗಾಯಗಳಾಗಿರುವುದು ಕಂಡು ಬಂದಿತ್ತು.
ಅನುಮಾನದ ಮೇಲೆ ಅರಿವುಸೆಲ್ವಂಳನ್ನು ಠಾಣೆಗೆ ಕರೆಯಿಸಿಕೊಂಡ ಅವರು, ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಳು. ಅಲ್ಲದೆ, ಇದಕ್ಕೆ ತನ್ನ ಸಂಬಂಧಿಕರಾದ ಬಿ. ಬಾಲಾಮಣಿ ಮತ್ತು ಬಿ. ಸುಮೈಯಾರ್ ಅವರ ಸಹಾಯ ಪಡೆದುಕೊಂಡಿದ್ದಾಗಿ ತಿಳಿಸಿದಳು ಎಂದು ಪೊಲಿಸರು ಹೇಳಿದ್ದಾರೆ.
ಪತಿ ಅಸಹಜ ಲೈಂಗಿಕಕ್ರಿಯೆಗೆ ಆಗ್ರಹಿಸುತ್ತಿದ್ದ. ಒಪ್ಪದಿದ್ದರೆ, ಮನಸೋಇಚ್ಛೆ ಥಳಿಸುತ್ತಿದ್ದ. ಇದರಿಂದ ಬೇಸತ್ತು ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆ ಬರೆಸಿ ಸುಧೀರ್ಗೆ ಕುಡಿಸಿದೆ. ಆತ ಗಾಢ ನಿದ್ದೆಗೆ ಜಾರಿದ ಬಳಿಕ ಸಂಬಂಧಿಕರ ಸಹಾಯದಿಂದ ಆತನ ಗುಪ್ತಾಂಗಗಳ ಮೇಲೆ ಗಾಯ ಮಾಡಿದ್ದಲ್ಲದೆ, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಗಿ ಅರಿವುಸೆಲ್ವಂ ತಪ್ಪೊಪ್ಪಿಗೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.