ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಹುಣಸೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಪಿ. ಮಂಜುನಾಥ್ ನಡುವಿನ ಆರೋಪ-ಪ್ರತ್ಯಾರೋಪ ಸಮರ ಸದ್ಯ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಆರಂಭದಲ್ಲಿ ಶಾಸಕ ಮಂಜುನಾಥ್ ಮೈಸೂರಿಗೆ ಇಬ್ಬರು ಮಹಾರಾಣಿಯರಿದ್ದಾರೆ, ಮೂರನೇಯವರ ಅವಶ್ಯಕತೆ ಇಲ್ಲವೆಂದು ಡಿಸಿ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ, ಪತ್ರದ ಮೂಲಕ ತಿರುಗೇಟು ನೀಡಿದ್ದರು. ಇದೀಗ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಡಿಸಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ
ಸುದ್ದಿಗೋಷ್ಠಿಯ ಆರಂಭದಲ್ಲೇ ಜಿಲ್ಲಾಧಿಕಾರಿಯನ್ನು ಹಿಟ್ಲರ್ಗೆ ಹೋಲಿಸಿದ ಶಾಸಕ ಮಂಜುನಾಥ್, ಕೆಡಿಪಿ ಸಭೆಯಲ್ಲಿ ಶಾಸಕರು, ಜನಪ್ರತಿನಿಧಿಗಳು ಪ್ರಶ್ನೆ ಮಾಡುವುದು ಸಹಜ. ಅದಕ್ಕೆ ಮುಂದಿನ ಸಭೆಯಲ್ಲಿ ಉತ್ತರಿಸಬೇಕು. ನಾನು ಪ್ರಶ್ನೆ ಮಾಡಿದ್ದು ನಿಜ. ಆದರೆ, ಜಿಲ್ಲಾಧಿಕಾರಿಗಳು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿಯೇ ಮರುದಿನವೇ ಪತ್ರ ಬರೆದಿದ್ದಾರೆ. ಆದರೆ, ಎರಡು ದಿನವಾದ್ರು ನನಗೆ ಪತ್ರ ತಲುಪಿಲ್ಲ. ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತರಾಗಿದ್ದಾರೆ. ನನಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ, ನನ್ನ ಪಿಎಗಾಗಲಿ, ಕಚೇರಿಗಾಗಲಿ, ಮನೆಗಾಗಲಿ ಬಂದಿಲ್ಲ. ಡಿಸಿ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ. ಕಾನೂನು ಮೀರಿ ವರ್ತಿಸಿದ್ದಾರೆ. ಒಬ್ಬ ಅಧಿಕಾರಿಯಾಗಿ ಜನಪ್ರತಿನಿಧಿಗಳ ಜತೆ ಹೀಗೆ ನಡೆದುಕೊಳ್ಳುತ್ತಾರಾ? ಎಂದು ಕೆಂಡಮಂಡಲವಾದರು.
ನಮ್ಮ ಅಪ್ಪನ ಆಸ್ತಿ ತಗೋಳೋದು ನಮಗೆ ಗೊತ್ತಿದೆ
ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ಪತ್ರ ಬರೆದಿದ್ದಾರೆ. ರೋಹಿಣಿ ಸಿಂಧೂರಿ ನನಗೆ ಪರೋಕ್ಷವಾಗಿ ಬೆದರಿಕೆ ಹಾಕ್ತಿದ್ದಾರೆ. ನಿಮ್ಮ ಫೈಲ್ಗಳು ನನ್ನ ಬಳಿ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ನನಗೆ ಪತ್ರ ಬರೆದು ಜಿಲ್ಲೆಯ ಜನಪ್ರತಿನಿಧಿಗಳು ಬಾಯಿ ಮುಚ್ಚಿಕೂರುವಂತೆ ಎಚ್ಚರಿಕೆ ನೀಡಿದ್ದಾರೆ. ಇದು ನನ್ನೊಬ್ಬನಿಗೆ ಬರೆದ ಪತ್ರವಲ್ಲ. ಕೆಡಿಪಿ ಸಭೆಯಲ್ಲಿ ಆದ ಚರ್ಚೆಗೆ ನನ್ನ ಜಮೀನು ವಿಚಾರ ಬರೆದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ನಮ್ಮ ಅಪ್ಪನ ಆಸ್ತಿ ತಗೋಳೋದು ನಮಗೆ ಗೊತ್ತಿದೆ. ಈ ಬೆದರಿಕೆ ತಂತ್ರಕ್ಕೆ ನಾನು ಹೆದರಲ್ಲ. ನನ್ನನ್ನು ಹೆದರಿಸುವ ಭ್ರಮೆಯಿಂದ ಹೊರಗೆ ಬನ್ನಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪೂಜಾ ಹೆಗ್ಡೆಯ ವಿಶ್ರಾಂತಿ ಕಸಿದ ರಶ್ಮಿಕಾ ಮಂದಣ್ಣ: ನ್ಯಾಷನಲ್ ಕ್ರಷ್ ಕಂಡ್ರೆ ಪೂಜಾಗೆ ಭಯವಾ?
ಸಿಎಂಗಳು ಬೆನ್ನಿಗಿದ್ದಾರೆ ಎಂದು ದುರಂಹಕಾರ ಬೇಡ
ಇದನ್ನೇ ಮುಂದುವರಿಸುವುದಾದರೆ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ತಾಲ್ಲೂಕಿನ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಈ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡುತ್ತೇನೆ. ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸ್ಪಂದನೆ ಹೆಸರಲ್ಲಿ ಡಿಸಿ ಮೆರವಣಿಗೆ ಮಾಡಬಹುದು. ಆದರೆ ಜನರ ಕೆಲಸ ಮಾಡುವುದು ಜನಪ್ರತಿನಿಧಿಗಳೇ. ಸಿಎಂಗಳು ಬೆನ್ನಿಗಿದ್ದಾರೆ ಎಂದು ದುರಂಹಕಾರ ಬೇಡ. ಕಾನೂನಿನ ಅಡಿಯಲ್ಲಿ ಕೆಲಸ ಮಾಡಿ ಎಂದು ಗರಂ ಆದರು.
ನಿಮ್ಮ ವೈಯುಕ್ತಿಕ ವಿಚಾರ ಜಗಜ್ಜಾಹೀರಾಗಿದೆ
ನಾನೂ ನಿಮ್ಮ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಿಮ್ಮ ವೈಯುಕ್ತಿಕ ವಿಚಾರ ಜಗಜ್ಜಾಹೀರಾಗಿದೆ. ಆ ಬಗ್ಗೆ ನಾನು ಮಾತನಾಡಲ್ಲ. ನನಗೂ ತಾಯಿ, ಹೆಂಡತಿ, ಮಗಳು ಇದ್ದಾರೆ. ಹೀಗಾಗಿ ನಾನು ಆ ಮಟ್ಟಕ್ಕೆ ಹೋಗುವುದಿಲ್ಲ. ನನಗೂ ಸೇರಿ ಹಲವರು ಶಾಸಕರಿಗೆ ಕರೊನಾ ಪಾಸಿಟಿವ್ ಆಗಿತ್ತು. ಡಿಸಿಯಾಗಿ ನಮ್ಮ ಆರೋಗ್ಯ ವಿಚಾರಿಸುವ ಕನಿಷ್ಠ ಸೌಜನ್ಯ ಮಾಡಲಿಲ್ಲ ಎಂದು ಟೀಕಿಸಿದರು.
ನಿಮ್ಮನ್ನು ಕಂಡರೆ ಭಯಪಡುವ ವಾತಾವರಣ ಇದೆ
ಕಾನೂನಿನ ಮುಂದೆ ಎಲ್ಲರೂ ಒಂದೇ. ನನಗೆ ವೈಯಕ್ತಿಕವಾಗಿ ಯಾವುದೇ ಸಹಾಯ ಮಾಡಬೇಡಿ. ಸಾರ್ವಜನಿಕರ ಕೆಲಸ ಮಾತ್ರ ಮಾಡಿಕೊಡಿ. ಶೇ. 75 ರಷ್ಟು ಅಧಿಕಾರಿಗಳಿಗೆ ನಿಮ್ಮಿಂದ ಭ್ರಮನಿರಸನರಾಗಿದ್ದಾರೆ. ನಿಮ್ಮನ್ನು ಕಂಡರೆ ಭಯಪಡುವ ವಾತಾವರಣ ಇದೆ. ಕಾನೂನು ಬಾಹಿರವಾಗಿ ನಮಗೆ ಪತ್ರ ಬರೆದಿರುವುದು ಅಕ್ಷಮ್ಯ ಅಪರಾಧ. ಕಾನೂನು ತಜ್ಞರ ಸಲಹೆ ಪಡೆದು ಡಿಸಿ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆಂದು ಎಚ್ಚರಿಸಿದರು.
ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ್ದಾರೆ
ಗಜಪಯಣ ಕಾರ್ಯಕ್ರಮದಲ್ಲಿ ಜನಪ್ರತಿನಿಧಿ ಕರೆಯಬಾರದು ಅಂತ ಯಾರು ಸೂಚನೆ ಕೊಟ್ಟಿದ್ದಾರೆ? ಹುಣಸೂರು ಜನಪ್ರತಿನಿಧಿಗಳಿಗೆ ಆಹ್ವಾನ ಇಲ್ಲ ಅನ್ನೋದಾದರೆ ಅರಮನೆ ಗಜ ಸ್ವಾಗತ ಕಾರ್ಯಕ್ರಮಕ್ಕೆ ಯಾಕೆ ಆಹ್ವಾನ ನೀಡಿದ್ರಿ? ಅಲ್ಲಿಗೆ ಎಂಎಲ್ಎ, ಎಂಎಲ್ಸಿ ಹಾಗೂ ಸಚಿವರು ಎಲ್ಲ ಬಂದಿದ್ರಲ್ಲ ಅದು ಹೇಗೆ ಸಾಧ್ಯ ಆಯ್ತು? ನನ್ನನ್ನು ಕರೆಯಬಾರದು ಅಂತ ನಿಮಗೆ ಯಾರಾದ್ರು ಹೇಳಿದ್ರಾ? ರೋಹಿಣಿ ಸಿಂಧೂರಿ ಅವರು ಎಲ್ಲ ಕಡೆ ಜನಪ್ರತಿನಿಧಿಗಳಿಗೆ ಪರ್ಯಾಯವಾಗಿ ಕಾರ್ಯಕ್ರಮ ಮಾಡ್ತಿದ್ದಾರೆ. ಇದು ಮಂಡ್ಯ, ಹಾಸನದಲ್ಲೂ ನಡೆದಿದೆ. ಮೈಸೂರಿನಲ್ಲೂ ಅದನ್ನು ಮುಂದುವರಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಜನಪ್ರತಿನಿಧಿಗಳ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಆರೋಪ ಮಾಡಿದರು. (ದಿಗ್ವಿಜಯ ನ್ಯೂಸ್)
ಮಹಾರಾಣಿ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಶಾಸಕನಿಗೆ ರೋಹಿಣಿ ಸಿಂಧೂರಿ ಟಾಂಗ್..!