ಹುನಗುಂದ: ತಾಲೂಕಿನ ಅಮರಾವತಿ ಗ್ರಾಮ ಪಂಚಾಯಿತಿ ನೂತನ ಸದಸ್ಯರ ಪ್ರಥಮ ಸಾಮಾನ್ಯ ಸಭೆ ಸೋಮವಾರ ನಡೆಯುತ್ತಿರುವ ವೇಳೆಯಲ್ಲೇ ರಾಮವಾಡಗಿ ಗ್ರಾಮದ ನೂತನ ಸದಸ್ಯ, ಡಿಎಸ್ಎಸ್ (ಭೀಮವಾದ) ಜಿಲ್ಲಾ ಸಂಘಟನೆ ಸಂಚಾಲಕ ಬಾಲಪ್ಪ ಚೌಡಪ್ಪ ಚಲವಾದಿ (46) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಭೆಯಲ್ಲಿ ಸದಸ್ಯರ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ಮುಗಿದ ನಂತರ ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಗಳ ಸಮಸ್ಯೆ ಹಾಗೂ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುವಾಗ ರಾಮವಾಡಗಿ ಗ್ರಾಮದಿಂದ ಆಯ್ಕೆಯಾದ ಸದಸ್ಯ ಬಾಲಪ್ಪ ಚಲವಾದಿ ತಮ್ಮ ಗ್ರಾಮದಲ್ಲಿರುವ ಅನೇಕ ಸಮಸ್ಯೆ ಹಾಗೂ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಿ ಕೊಡುವ ವೇಳೆಯಲ್ಲಿ ತೀವ್ರ ಹೃದಯಾಘಾತದಿಂದ ನಿಂತಲ್ಲಿಯೇ ನೆಲೆಕ್ಕೆ ಕುಸಿದು ಬಿದ್ದರು. ಕೂಡಲೇ ಅಲ್ಲಿದ್ದ ಸದಸ್ಯರು ಮತ್ತು ಅಧಿಕಾರಿಗಳು ಅವರನ್ನು ಇಳಕಲ್ಲ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.