ಹುಮನಾಬಾದ್: ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಎಇಇ ಶಾಮಸುಂದರ ಕಾಳೇಕರ ಅವರ ಅಮಾನತು ಆದೇಶ ಹಿಂಪಡೆದು ಮೂಲ ಕೇಂದ್ರದಲ್ಲೇ ಮುಂದುವರಿಸುವಂತೆ ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಹತ್ತಿರ ತಾಲೂಕು ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ಸಾಂಕೇತಿಕ ಧರಣಿ ನಡೆಸಿತು.
ಒಕ್ಕೂಟದ ಪ್ರಮುಖರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ರಾಜಕೀಯ ಷಡ್ಯಂತ್ರದಿಂದ ದಲಿತ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಕಿಡಿಕಾರಿದರು.
ಕಳೆದ ಡಿ.೨೨ರಂದು ಘಾಟಬೋರಳ ಮತ್ತು ದುಬಲಗುಂಡಿಗಳಲ್ಲಿ ನಡೆದಿದ್ದ ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟನಾ ಸಮಾರಂಭದ ವೇದಿಕೆ ಪ್ಲೆಕ್ಸ್ನಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಫೋಟೋ ಹಾಕುವ ವಿಚಾರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಅಧಿಕಾರಿ ಕಾಳೇಕರ ಅವರನ್ನು ಅಮಾನತು ಮಾಡಿದ್ದು ಖಂಡನೀಯ ಎಂದರು.
ಗ್ರೇಡ್-೨ ಅಧಿಕಾರಿಯನ್ನು ನೇರವಾಗಿ ಅಮಾನತು ಮಾಡದೆ ಕಾರಣ ಕೇಳಿ ನೋಟಿಸ್ ಕೊಡಬೇಕು. ಇಲ್ಲವೆ ಇಲಾಖಾ ವಿಚಾರಣೆ ಮಾಡಬೇಕು. ಇದೆಲ್ಲ ಬಿಟ್ಟು ನೇರವಾಗಿ ಸಸ್ಪೆಂಡ್ ಮಾಡಿರುವುದು ೧೯೫೭ರ ಕರ್ನಾಟಕ ನಾಗರೀಕ ಸೇವಾ ನಿಯಮದ ವಿರುದ್ಧವಾಗಿದೆ. ಹೀಗಾಗಿ ಅಮಾನತು ಆದೇಶ ಹಿಂಪಡೆದು ಮೂಲ ಸ್ಥಾನದಲ್ಲೇ ಮುಂದುವರಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ಪ್ರಮುಖರಾದ ಗೌತಮ ಚವ್ಹಾಣ್, ಪರಮೇಶ್ವರ ಕಾಳಮಂದರಗಿ, ಗೌತಮ ಪ್ರಸಾದ, ರವಿ ಹೊಸಳೆ, ಮಧುಕರ ಹಿಲಾಲಪುರ, ಸತೀಶ ರಂಜೇರಿ, ಅಣ್ಣಾರಾವ ಪುರುಷೋತ್ತಮ, ಗೌತಮ ಸಾಗರ, ಸಂಜೀವಕುಮಾರ ಜಂಜೀರ, ಪ್ರಶಾಂತ ವಳಖಿಂಡಿ, ವೈಜಿನಾಥ ಸೂರ್ಯವಂಶಿ, ರವಿ ನಿಜಾಂಪುರೆ, ರಾಜಕುಮಾರ ಕಾಣೆ, ಚಂದ್ರಪ್ರಕಾಶ ಆರ್ಯ, ರವಿ ಖರ್ಗೆ, ವೈಜಿನಾಥ ಶಿಂಧೆ ಇತರರು ಪಾಲ್ಗೊಂಡಿದ್ದರು. ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ಸಲ್ಲಿಸಲಾಯಿತು.