More

    ಸರ್ಕಾರಿ ಶಾಲೆಗೆ 2 ಎಕರೆ ಜಮೀನು ದಾನ ಮಾಡಿ ಮಕ್ಕಳ ಶಿಕ್ಷಣಕ್ಕೆ ನೆರವಾದ ಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ

    ಬೆಂಗಳೂರು: ಕೋಟಿ ಕೋಟಿ ಹಣವಿದ್ದರೂ ಒಂದೇ ಒಂದು ರೂಪಾಯಿ ಖರ್ಚು ಮಾಡಲು ಹಿಂದೆ-ಮುಂದೆ ನೋಡುವ ಮತ್ತು ನೂರು ಬಾರಿ ಯೋಚಿಸುವ ಈ ಕಾಲದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಬಿಟ್ಟುಕೊಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿರುವ ಕೊಪ್ಪಳದ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

    2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇಂದು (ಅ.31) ಪ್ರಕಟವಾಗಿದೆ. ಈ ಬಾರಿ ವಿವಿಧ ಕ್ಷೇತ್ರದ 68 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ತಮ್ಮೂರಿನ ಸರ್ಕಾರಿ ಶಾಲೆಗೆ ಕೋಟ್ಯಂತರ ರೂ. ಬೆಲೆ ಬಾಳುವ ಎರಡು ಎಕರೆ ಜಮೀನನ್ನು ದಾನ ಮಾಡಿರುವ ಹುಚ್ಚಮ್ಮ ಬಸಪ್ಪ ಚೌಧರಿ ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಅಂದಹಾಗೆ ಹುಚ್ಚಮ್ಮ ಬಸಪ್ಪ ಅವರು ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ನಿವಾಸಿ. ಜಮೀನು ದಾನ ಮಾಡಿರುವ ಹುಚ್ಚಮ್ಮ ಇಂದಿಗೂ ಜೋಪಡಿಯಲ್ಲಿ ವಾಸವಿದ್ದಾರೆ.

    ಈ ಕಾಲದಲ್ಲಿ ಜಮೀನು ದಾನ ಮಾಡುವುದು ಅಂದರೆ ಸುಮ್ಮನೇ ಅಲ್ಲ. ತುಂಡು ಭೂಮಿಗಾಗಿ ಎರಡು ದೇಶಗಳ ನಡುವೆ ಯುದ್ಧವೇ ನಡೆಯುವಾಗ ಮತ್ತು ಸಂಬಂಧಗಳನ್ನು ಲೆಕ್ಕಿಸದೇ ಕೊಲೆ, ಸುಲಿಗೆ ಮಾಡುವಂತ ಈ ಕಾಲಘಟ್ಟದಲ್ಲಿ ತನ್ನ ಜೀವನಕ್ಕೆ ಆಧಾರವಾಗಿದ್ದ ಎರಡು ಎಕರೆ ಜಮೀನನ್ನು ಮಕ್ಕಳ ಶಿಕ್ಷಣಕ್ಕೆಂದು ದಾನ ಮಾಡಿರುವ ಹುಚ್ಚಮ್ಮ ಬಸಪ್ಪ ಚೌದ್ರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಗೆ ಒಂದು ಗೌರವ ಲಭಿಸಿದಂತಾಗಿದೆ.

    ಮಕ್ಕಳ ಭವಿಷ್ಯಕ್ಕೆ ಹುಚ್ಚಮ್ಮ ಕೊಡುಗೆ
    ಹುಚ್ಚಮ್ಮ ಚೌದ್ರಿ ಅವರು 40 ವರ್ಷಗಳ ಹಿಂದೆಯೇ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಹುಚ್ಚಮ್ಮಗೆ ಮಕ್ಕಳು ಕೂಡ ಇಲ್ಲ. ಆದರೆ, ಹೆಣ್ಣು ಮಗುವೊಂದನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಶಾಲೆಯ ಮಕ್ಕಳನ್ನು ತನ್ನ ಮಕ್ಕಳೆಂದೇ ಭಾವಿಸಿರುವ ಹುಚ್ಚಮ್ಮ, ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ತನ್ನ ಹೆಸರಿನಲ್ಲಿ ಇದ್ದ ಎರಡು ಎಕರೆ ಜಮೀನನ್ನು ಶಾಲೆಗೆ ಬರೆದುಕೊಟ್ಟಿದ್ದಾರೆ. ಅಲ್ಲದೇ ಅದೇ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

    ವಯಸ್ಸಾದರೂ ನಿಲ್ಲದ ಸೇವೆ
    ಹುಚ್ಚಮ್ಮ ಅವರಿಗೆ ವಯಸ್ಸು 60 ವರ್ಷ ದಾಟಿ ನಿವೃತ್ತಿಯಾಗಿದ್ದರೂ, ಸುಮ್ಮನೇ ಕಾಲ ಕಳೆಯುವ ಬದಲು ನಮ್ಮ ಸೇವೆ ಯಾರಿಗಾದರೂ ಉಪಯೋಗವಾಗಲಿ ಎಂಬ ಆಶಯದೊಂದಿಗೆ ಈಗಲೂ ಶಾಲೆಯಲ್ಲಿ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ನೆರವಾಗಲೆಂದು ಎರಡು ಎಕರೆ ಜಮೀನನ್ನು ದಾನ ಮಾಡಿ ಕೊಡುಗೈ ದಾನಿ ಎನಿಸಿಕೊಂಡಿರುವ ಹುಚ್ಚಮ್ಮ ಅವರಿಗೆ ಕನ್ನರ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಖುಷಿಯ ಸಂಗತಿಯಾಗಿದೆ.

    Kannada Rajyotsava Award 2023: 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, 68 ಜನರ ಪಟ್ಟಿ ಇಲ್ಲಿದೆ

    ನಟ ದರ್ಶನ್ ವಿರುದ್ಧ ದೂರು ಕೊಟ್ಟ ಮಹಿಳೆ​: ಹರಿದುಹೋದ ಬಟ್ಟೆ, ಹೊಟ್ಟೆಗೆ ಗಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts