ಹುಬ್ಬಳ್ಳಿ: ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದ ವಿಚಾರಣೆಗಾಗಿ ಭೂಗತ ಪಾತಕಿ ಯೂಸೂಫ್ ಬಚ್ಚಾಖಾನ್ ಸೇರಿದಂತೆ 14 ಆರೋಪಿಗಳು ಇಲ್ಲಿನ 4ನೇ ಅಧಿಕ ದಿವಾಣಿ ಮತ್ತು ಸತ್ರ ನ್ಯಾಯಾಲಯ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಿದ್ದರು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತು.
ಧಾರವಾಡದ ಅಫ್ತಾಬ್ ಬೇಪಾರಿ, ತೌಸಿಫ್ ನಿಪ್ಪಾಣಿ, ಅತಿಯಾಬ್ಖಾನ್ ತಡಕೋಡ, ಹುಬ್ಬಳ್ಳಿಯ ಅಮೀರ್ ತಮಾಟಗಾರ, ಧಾರವಾಡದ ಮೊಹಿನುದ್ದೀನ್ ಪಟೇಲ್, ಮುಂಬೈ ಮೂಲದ ಯೂಸೂಫ್ ಬಚ್ಚಾಖಾನ್, ಮುಂಬೈನ ನೀಲೇಶ ನಂದಗಾವ್ಕರ, ಅನೂಪಸಿಂಗ್ ಸಿಂಗಿಲಾಲ್, ಮಾಮು ಅಲಿಯಾಸ್ ಸುನೀಲ ಬನ್ಸೋಡೆ, ನವನಾಥ ದಲಾಸ್, ಮೈಸೂರಿನ ಶಹಜಾನ್ ಅಶ್ರಫ್, ಸೈಯದ್ ಸೊಹೈಲ್ ಪೀರ್, ರಾಜೇಂದ್ರ ರಾವತ್, ಧಾರವಾಡದ ಮಹಮ್ಮದ್ ಹ್ಯಾರಿಶ್ ಪಠಾಣ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಹಳೇ ಹುಬ್ಬಳ್ಳಿ ಅಲ್ ತಾಜ್ ಸಭಾ ಭವನದ ಬಳಿ 2020ರ ಆಗಸ್ಟ್ 6ರಂದು ರೌಡಿಶೀಟರ್ ಫ್ರೂಟ್ ಇರ್ಫಾನ್ ನನ್ನು ಶೂಟ್ ಮಾಡಿ ಹತ್ಯೆಗೈಯಲಾಗಿತ್ತು. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರೀತಿ.ಕೆ. ಅವರು ಮುಂದಿನ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದರು. ಜಿಲ್ಲಾ ನ್ಯಾಯಾಧೀಶರು ಮುಂದಿನ ವಿಚಾರಣೆ ನಡೆಸಲಿದ್ದಾರೆ.
ಪ್ರತ್ಯೇಕ ಚಾರ್ಜ್ಶೀಟ್
ಪ್ರಕರಣದ 11ನೇ ಆರೋಪಿ ಮುಂಬೈನ ಅವಿನಾಶ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ವಿಷಯವಾಗಿ ಹಳೇ ಹುಬ್ಬಳ್ಳಿ ಪೊಲೀಸರು ಪ್ರತ್ಯೇಕ ಚಾರ್ಜ್ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.