ಹುಬ್ಬಳ್ಳಿ: ಮೂರು ಜನ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಕಿದವರನ್ನ ಬಂಧಿಸಿದ್ದೇವೆ. ಅವರ ವಿರುದ್ಧ ದೇಶದ್ರೋಹ ಹಾಗೂ ಕೋಮು ಸೌಹಾರ್ದ ಕದಡುವ ಪ್ರಕರಣ ದಾಖಲಿಸಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಹೇಳಿದ್ದಾರೆ.
ಎರಡನೇ ಸೆಮಿಸ್ಟರ್ನ ಸಿವಿಲ್ ಇಂಜಿನಿಯರಿಂಗ್ನ ಇಬ್ಬರು ಹಾಗೂ ಆರನೇ ಸೆಮಿಸ್ಟರ್ನ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ್ ಅನಾಮಿ ಈ ಬಗ್ಗೆ ದೂರು ನೀಡಿದ್ದಾರೆ. ಮೂವರ ವಿರುದ್ಧ ಐದು ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳ ಹಿನ್ನೆಲೆ ಹಾಗೂ ಅವರ ಬಗ್ಗೆ ಎಲ್ಲ ತನಿಖೆ ನಡೆಸಲಾಗುವುದು. ಬಂಧಿತರು ಕಾಶ್ಮೀರ ಮೂಲದವರು ಎಂದು ಗೊತ್ತಾಗಿದೆ. ಈ ಸಂಬಂಧ ವಿಡಿಯೋ ವಶ ಪಡಿಸಿಕೊಂಡಿದ್ದು ಅದನ್ನು ಲ್ಯಾಬ್ಗೆ ಕಳಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಮಾಹಿತಿ ಗೊತ್ತಾಗಲಿದೆ. ವಿದ್ಯಾರ್ಥಿಗಳ ಮೊಬೈಲ್ ಹಾಗೂ ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ದೇಶದ್ರೋಹದ ಕೆಲಸ ಮಾಡಿದವರನ್ನು ಹಿಡಿದು ಒಳಗೆ ಹಾಕಬೇಕು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಗಟ್ಟಿ ನಿಂತು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಭಾರತ ಸರ್ಕಾರದಿಂದ ಸ್ಕಾಲರಶಿಪ್ ಪಡೆದವರು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದರೆ ಏನೂ ಆಗುವುದಿಲ್ಲ ಎನ್ನುವ ಮಾನಸಿಕ ಭಾವನೆ ಅವರಿಗಿದೆ ಎನಿಸುತ್ತದೆ. ದೇಶದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಬಿಎಸ್ವೈ ಸರ್ಕಾರ ಇದೆ ಅಂತಾ ಅವರಿಗೆ ಗೊತ್ತಿಲ್ಲ. ಯಾವುದೇ ನೀತಿಯ ವಿರುದ್ಧ ಹೋರಾಟ ಮಾಡುವುದಕ್ಕೆ ಅಭ್ಯಂತರ ಇಲ್ಲ. ಸಿದ್ದರಾಮಯ್ಯ ಅವರಂತಹ ನಾಯಕರು ಸಪೋರ್ಟ್ ಮಾಡ್ತಾ ಇರೋದಿಂದ್ರ ಹೀಗೆಲ್ಲ ಆಗುತ್ತಿದೆ. ಘೋಷಣೆ ಕೂಗಿದವರ ಮೇಲೆ ಈಗ ಅತ್ಯಂತ ಕಠಿಣ ಕ್ರಮಕೈಗೊಳ್ಳತಾರೆ. ಇವರಂಥವರನ್ನು ಸರ್ಕಾರ ಬಿಡುವುದಿಲ್ಲ, ಕೇಂದ್ರ ಸರ್ಕಾರ ಕೂಡ ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆ.
| ಪ್ರಹ್ಲಾದ ಜೋಶಿ ಕೇಂದ್ರ ಸಚಿವ