ನವದೆಹಲಿ: ಲಾಕ್ಡೌನ್ ಮುಂದುವರಿಸಬೇಕೆ, ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಬೆನ್ನಲ್ಲೇ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಮಂಗಳವಾರ (ಏ.28) ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಜತೆ ಸಭೆ ಸಭೆ ನಡೆಸಲಿದ್ದಾರೆ.
ಲಾಕ್ಡೌನ್ ತೆರವುಗೊಂಡು ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈಗಾಗಲೇ 1ರಿಂದ 8ನೇ ತರಗತಿವರೆಗಿನ ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ. 9ನೇ ತರಗತಿಗೆ ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ಉತ್ತೀರ್ಣ, ಅನುತ್ತೀರ್ಣ ಮಾಡಲಾಗುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ.
ಇನ್ನು, ಸಿಬಿಎಸ್ಇ ಪಠ್ಯಕ್ರಮದಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಗಳು ನಡೆದಿದ್ದು, ಬಾಕಿಯಿರುವ ಪರೀಕ್ಷೆಗಳ ಪೈಕಿ ಪಾಸಾಗಲು ಅಗತ್ಯವಿರುವ ವಿಷಯಗಳಲ್ಲಷ್ಟೇ ಪರೀಕ್ಷೆ ನಡೆಸಲಾಗುತ್ತದೆ ಎಂದರು.
ಇನ್ನು, ಜೆಇಇ ಮೇನ್, ನೀಟ್ ಮೊದಲಾದ ಪ್ರವೇಶ ಪರೀಕ್ಷೆಗಳನ್ನು ವಿಳಂಬಗೊಳಿಸಲಾಗಿದೆಯಷ್ಟೇ. ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಇದನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಎಲ್ಲ ವಿಷಯಗಳನ್ನು ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ.
ಈ ನಡುವೆ ಪರೀಕ್ಷೆಗಳನ್ನೇ ರದ್ದು ಮಾಡಿ, ಗ್ರೇಸ್ ಅಂಕಗಳನ್ನು ನೀಡಿ ಎಂದು ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ದುಂಬಾಲು ಬಿದ್ದಿದ್ದಾರೆ. ಕೆಲ ವಿಷಯಗಳಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದ್ದರೆ, ಪದವಿ ಕಾಲೇಜುಗಳ ನಡೆಸುವ ಪ್ರವೇಶ ಪರೀಕ್ಷೆ ವೇಳೆ ನಡೆಸಿ ಎಂದು ಸಲಹೆ ನೀಡಿದ್ದಾರೆ.
ಐಐಟಿ, ಎನ್ಐಟಿಗಳಿಂದ ಸಪ್ಟೆಂಬರ್ನಲ್ಲಿ ನೂತನ ಶೈಕ್ಷಣಿಕ ವರ್ಷಾರಂಭ, ಜೂನ್ 20-22ರಂದು ಜೆಇಇ ಮೇನ್ ಸಾಧ್ಯತೆ