ಲಖನೌ: ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ)ಕ್ಕೆ ಮಾತ್ರ ಅವಕಾಶವಿರುವಾಗ ತನ್ನ ಡೇಟಾ ಬೇಸ್ನಲ್ಲಿ ಆಧಾರ್ ನಂಬರ್ ಬದಲಾಯಿಸಲು ನ್ಯಾಯಬೆಲೆ ಅಂಗಡಿ ಡೀಲರ್ಗೆ ಹೇಗೆ ಸಾಧ್ಯ? ಎಂದು ಉತ್ತರ ಪ್ರದೇಶದ ಅಲಹಬಾದ್ ಹೈಕೊರ್ಟ್ ಮಹತ್ವದ ಪ್ರಶ್ನೆಯೊಂದನ್ನು ಸರ್ಕಾರದ ಮುಂದಿಟ್ಟಿದೆ.
ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ನೇತೃತ್ವದ ಏಕಸದಸ್ಯ ಪೀಠವು ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದೆ. ಖಾಸಗಿ ವ್ಯಕ್ತಿಯೊಬ್ಬ ಹೇಗೆ ತಾನೇ ಕೇಂದ್ರ ಸರ್ಕಾರ ನಿರ್ವಹಿಸುವ ಡೇಟಾವನ್ನು ಬದಲಾಯಿಸಲು ಸಾಧ್ಯ? ಎಂದು ಪ್ರಶ್ನಿಸಿ, ಈ ಸಂಬಂಧ ವೈಯಕ್ತಿಕ ಅಫಿಡೆವಿಟ್ ಸಲ್ಲಿಸಿ, ವಿವರಣೆ ನೀಡುವಂತೆ ಕೇಳಿದೆ.
ಫಲಾನುಭವಿಗಳ ಆಧಾರ್ ಮಾಹಿತಿ ಬದಲಾವಣೆ ಆರೋಪದಡಿಯಲ್ಲಿ ಜಿಲ್ಲಾಡಳಿತ ನ್ಯಾಯಬೆಲೆ ಅಂಗಡಿ ವ್ಯಾಪಾರಿ ಅವಧೇಶ್ ಕುಮಾರ್ ಎಂಬುವರ ಪರವಾನಗಿಯನ್ನು ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ, ಅವಧೇಶ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಫಿಡೆವಿಟ್ ಸಲ್ಲಿಸಲು ಹೇಳಿದೆ.
ಇದನ್ನೂ ಓದಿ: ‘ನನ್ನ ಗಂಡನ ಹೆಸರು ತುಂಬ ಉದ್ದ…ನನ್ನ ಬೆರಳು ಸಣ್ಣ…’: ಅಲವತ್ತುಕೊಂಡ ಕಿರುತೆರೆ ನಟಿ
ಡೀಲರ್ ವಿರುದ್ಧದ ಆರೋಪವೇನು?
ಅಪರಿಚಿತ ಟೆಕ್ನಿಕಲ್ ಆಪರೇಟರ್ನಿಂದ ನ್ಯಾಯಬೆಲೆ ಅಂಗಡಿ ಡೀಲರ್, ಫಲಾನುಭವಿಗಳು ಆಧಾರ್ ಕಾರ್ಡ್ ನಂಬರ್ ಬದಲಾಯಿಸಿ, ಫಲಾನುಭವಿಯಲ್ಲದ ಇತರೆ ವ್ಯಕ್ತಿಗಳ ಬಯೋಮೆಟ್ರಿಕ್ ಬಳಸಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆತನ ಪರವಾನಗಿಯನ್ನು ಜಿಲ್ಲಾಡಳಿತ ರದ್ದು ಮಾಡಿರುವುದಾಗಿ ತಿಳಿದುಬಂದಿದೆ.
ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದನ್ನು ಪ್ರಶ್ನಿಸಿರುವ ಕೋರ್ಟ್ ಆಧಾರ್ ಮಾಹಿತಿ ಬದಲಾವಣೆ ಅವಕಾಶ ಎನ್ಐಸಿಗೆ ಮಾತ್ರ ಇರುವಾಗ ನ್ಯಾಯಬೆಲೆ ಅಂಗಡಿ ಡೀಲರ್ ಹೇಗೆ ಬದಲಾಯಿಸಲು ಸಾಧ್ಯವೆಂದು ಪ್ರಶ್ನಿಸಿದೆ. ಡೇಟಾ ಗೌಪ್ಯತೆ ದೃಷ್ಟಿಯಿಂದ ಕೋರ್ಟ್ ಕೇಳಿರುವ ಈ ಪ್ರಶ್ನೆ ಮಹತ್ವದ್ದಾಗಿದೆ.
ತಾಂತ್ರಿಕವಾಗಿ ಅಸಾಧ್ಯ
ತನ್ನ ವಿರುದ್ಧದ ಆರೋಪವನ್ನು ಅಲ್ಲಗೆಳೆದಿರುವ ಡೀಲರ್, ಅಧಾರ್ ಬದಲಾವಣೆ ತಾಂತ್ರಿಕವಾಗಿ ಅಸಾಧ್ಯವಾಗಿರುವಾಗ ಮತ್ತು ಅಪೂರ್ಣ ಮಾಹಿತಿ ಆಧಾರದ ಮೇಲೆ ನನ್ನ ವಿರುದ್ಧ ಆರೋಪ ಮಾಡಲಾಗಿದೆ ಎಂದು ಅರ್ಜಿದಾರ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಆಧಾರ್ ನಂಬರ್ ಬದಲಾಯಿಸಲು ಎನ್ಐಸಿ ಹೊರತುಪಡಿಸಿ ಯಾರಿಗೂ ಸಾಧ್ಯವಿಲ್ಲ ಎಂಬುದು ಕೋರ್ಟ್ ಗಮನಕ್ಕೂ ಬಂದಿದ್ದು, ಈ ಹಿನ್ನೆಲೆಯಲ್ಲಿ ಅಫಿಡೆವಿಟ್ ಸಲ್ಲಿಸಿ, ವಿವರಣೆ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೋರ್ಟ್ ಸೂಚಿಸಿದ್ದು, ಅಕ್ಟೋಬರ್ 22ಕ್ಕೆ ವಿಚಾರಣೆ ಮುಂದೂಡಿದೆ. (ಏಜೆನ್ಸೀಸ್)
‘ಮರಕ್ಕೆ ಹೆಣ್ಣು ಹುಲಿಯ ಭಾವನಾತ್ಮಕ ಅಪ್ಪುಗೆ…’: ಪ್ರಶಸ್ತಿ ವಿಜೇತ ಅದ್ಭುತ ಫೋಟೋ ಇದು