ನವದೆಹಲಿ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಗ್ರಾಮವೊಂದರಲ್ಲಿ ಮೂರು ಗೌರವ ಹತ್ಯೆಗಳು ನಡೆದಿದ್ದರೂ ತುಂಬಾ ದಿನಗಳವರೆಗೂ ಅದು ಯಾರಿಗೂ ಗೊತ್ತಾಗಿರಲಿಲ್ಲ. ಆದರೆ, ಕೊಲೆಗಾರರು ಮಾಡಿದ ಒಂದು ಯಡವಟ್ಟು ಇದೀಗ ಅವರ ಗುಟ್ಟನ್ನು ಬಯಲು ಮಾಡಿದೆ.
ಆಗಿದ್ದೇನೆಂದರೆ, ಆ ಗ್ರಾಮದ ಬಂಟಿ ಎಂಬಾತನ ಮದುವೆ ನಿಗದಿಯಾಗಿತ್ತು. ಆದರೂ ಆತ ತಾನು ಪ್ರೀತಿಸುತ್ತಿದ್ದ ತನ್ನ ದೂರದ ಸಂಬಂಧಿ ಸುಖಿಯಾ ಎಂಬ ಹುಡುಗಿಯೊಂದಿಗೆ ಪರಾರಿಯಾಗಿದ್ದ. ಈ ವಿಷಯ ತಿಳಿದ ಸುಖಿಯಾಳ ಅಣ್ಣ ವಿನೀತ್ ಓಡಿಹೋದ ಜೋಡಿಗಾಗಿ ಹುಡುಕುತ್ತಲೇ ಇದ್ದ.
ಜುಲೈ 1ರಂದು ಸುಖಿಯಾ ಮತ್ತು ಬಂಟಿ ಹೊಲವೊಂದರಲ್ಲಿ ಅಡಗಿಕೊಂಡಿರುವುದು ಗೊತ್ತಾಯಿತು. ತಕ್ಷಣವೇ ತನ್ನ ಮೂವರು ಸ್ನೇಹಿತರೊಂದಿಗೆ ಅಲ್ಲಿಗೆ ಹೋದ ವಿನೀತ್, ತನ್ನ ಸಹಚರರ ಜತೆಗೂಡಿ ಉಸಿರುಗಟ್ಟಿಸಿ ಅವರಿಬ್ಬರನ್ನೂ ಹತ್ಯೆ ಮಾಡಿದ್ದರು. ಬಳಿಕ ಹತ್ತಿರದಲ್ಲಿದ್ದ ಮರವೊಂದಕ್ಕೆ ಹಗ್ಗದ ಕುಣಿಕೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಬಿಂಬಿಸಿದ್ದರು. ಹತ್ಯೆಗೆ ಸಹಕರಿಸಿದ್ದಕ್ಕಾಗಿ ವಿನೀತ್ ತನ್ನ ಸ್ನೇಹಿತರಿಗೆ 2.5 ಲಕ್ಷ ರೂಪಾಯಿ ಕೊಟ್ಟಿದ್ದ.
ಇದನ್ನು ಕಂಡವರಿಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಇಬ್ಬರೂ ಪ್ರೀತಿಸುತ್ತಿದ್ದರು. ಬಂಟಿಯ ಮದುವೆ ಬೇರೆ ನಿಗದಿಯಾಗಿತ್ತು. ಬೇರೆಯಾಗಲು ಇಷ್ಟವಿಲ್ಲದೆ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ ಎಂದೇ ಎಲ್ಲರೂ ಮಾತನಾಡಿಕೊಂಡರು.
ಇದನ್ನೂ ಓದಿ: ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?
ಆದರೆ, ಹುಡುಗಿಯ ಮತ್ತೊಬ್ಬ ಸಹೋದರ ಕುಲದೀಪ್ ತನ್ನ ಅಣ್ಣ ವಿನೀತ್ ಮತ್ತು ಆತನ ಸಹಚರರ ಕೃತ್ಯವನ್ನು ಕಣ್ಣಾರೆ ಕಂಡಿದ್ದ. ಈ ವಿಷಯ ವಿನೀತ್ಗೆ ಗೊತ್ತಾಯಿತು. ಒಂದು ವಾರದ ಬಳಿಕ ಕುಲದೀಪ್ನನ್ನೂ ಉಪಾಯವಾಗಿ ಅದೇ ಹೊಲಕ್ಕೆ ಕರೆದೊಯ್ದು, ಉಸಿರುಗಟ್ಟಿಸಿ ಹತ್ಯೆ ಮಾಡಿ, ಮರದ ಕೊಂಬೆಗೆ ನೇಣಿನ ಕುಣಿಕೆ ಕಟ್ಟಿ ಶವವನ್ನು ನೇತಾಕಿ ಪರಾರಿಯಾಗಿದ್ದರು.
ಈ ಬಾರಿ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ, ಹತ್ಯೆ ಎಂಬುದು ಖಚಿತಪಟ್ಟಿತು. ಹಾಗಾಗಿ ಆರೋಪಿಗಳಿಗಾಗಿ ತಲಾಷ್ ಆರಂಭಿಸಿದಾಗ ಈ ಹಿಂದೆ ಇದೇ ಜಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಖಿಯಾಳ ಅಣ್ಣ ವಿನೀತ್ ಬಗ್ಗೆ ಅನುಮಾನ ಮೂಡಿತು.
ಆತನನ್ನು ಕರೆದೊಯ್ದು ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡ ಎನ್ನಲಾಗಿದೆ. ಕುಟುಂಬದ ಗೌರವ ಕಾಪಾಡಲು ಈ ಕೃತ್ಯ ಎಸಗಿದ್ದಾಗಿ ಹೇಳಿದ ಎನ್ನಲಾಗಿದೆ. ಇದೀಗ ಆತ ಹಾಗೂ ಆತನ ಸಹಚರರು ಕಂಬಿಯ ಹಿಂದೆ ಸರಿದಿದ್ದಾರೆ.
ಕೋವಿಡ್-19 ಪಿಡುಗಿನಿಂದಾಗಿ ಒಡೆಯುತ್ತಿವೆ ಹೃದಯಗಳು, ಇದಕ್ಕೆ ಸೋಂಕು ಕಾರಣವಲ್ಲ!