ಶಿವಮೊಗ್ಗ: ರವೀಂದ್ರ ನಗರ ಗಣಪತಿ ದೇವಾಲಯದ ಪಕ್ಕದ ಖಾಲಿ ಜಾಗದ ಮಾಲೀಕತ್ವ ವಿವಾದ ಬುಧವಾರ ಮತ್ತೆ ತಾರಕಕ್ಕೇರಿದ್ದು, ಕೆಲ ತಿಂಗಳ ಹಿಂದೆ ಈ ಜಾಗ ನಮಗೆ ಸೇರಿದ್ದು ಇದರಲ್ಲಿ ಗಣಪತಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಛತ್ರ ನಿರ್ಮಾಣ ಮಾಡಲಾಗುವುದು ಎಂದು ಶಿವಮೊಗ್ಗ ಹೌಸಿಂಗ್ ಸೊಸೈಟಿ ಪದಾಧಿಕಾರಿಗಳು ಮುಂದಾಗಿದ್ದರು.
ರವೀಂದ್ರ ನಗರ ನಿವಾಸಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಭೇಟಿ ಮಾಡಿ, ಇದು ನಗರಸಭೆ ಜಾಗ. ಇದರ ಅತಿಕ್ರಮಣಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದರು. ಬುಧವಾರ ಈ ಜಾಗದಲ್ಲಿ ನಗರಸಭೆ ಅಧಿಕಾರಿಗಳು ಪಾರ್ಕ್ ನಿರ್ವಣಕ್ಕೆ ಮುಂದಾದಾಗ ಬಿಗುವಿನ ವಾತಾವರಣ ನಿರ್ವಣವಾಯಿತು.
ಪಾಲಿಕೆ ಆಯುಕ್ತರ ನಿರ್ದೇಶನದ ಮೇರೆಗೆ ಪೊಲೀಸ್ ಬಂದೋಬಸ್ತ್ನಲ್ಲಿ ಪಾಲಿಕೆ ಸಿಬ್ಬಂದಿ ಪಾರ್ಕ್ ನಿರ್ವಣಕ್ಕೆ ಮುಂದಾದಾಗ ರವೀಂದ್ರ ನಗರ ಗಣಪತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಹಾಗೂ ಶೇಷಾದ್ರಿ ನಡುವೆ ವಾಗ್ವಾದವೂ ನಡೆಯಿತು. ಪೊಲೀಸರು ಶೇಷಾದ್ರಿ ಅವರನ್ನು ಸ್ಥಳದಿಂದ ಕರೆದೊಯ್ದರು.
ಈ ಖಾಲಿ ಜಾಗ ಪಾಲಿಕೆ ಹೆಸರಿನಲ್ಲಿದೆ. ಖಾತೆಗೆ ಸಂಬಂಧಿಸಿದ ದಾಖಲೆಗಳೂ ಇವೆ. ಇಲ್ಲಿ ಪಾರ್ಕ್ ನಿರ್ವಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಆಯುಕ್ತರು ಸೂಚನೆ ನೀಡಿದ್ದಾರೆ. ಆದರೆ ಕೆಲಸಕ್ಕೆ ಗಣಪತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ ಎಂಬುದು ಪಾಲಿಕೆ ಸಿಬ್ಬಂದಿ ಆರೋಪವಾಗಿದೆ.