ಮುಂಬೈ: ‘ಲಸಿಕೆ ಪಡೆದು ವಿಶ್ರಾಂತಿ ತೆಗೆದುಕೊಳ್ಳಿ’ ಎಂಬ ಆಫರ್ಗಳನ್ನು ಕೆಲವು ಹೊಟೆಲ್ಗಳು ಆರಂಭಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಲಾಕ್ಡೌನ್ನಿಂದಾಗಿ ಮನೆಯಲ್ಲೇ ಇದ್ದು ಬೇಸರಗೊಂಡಿರುವ, ಲಸಿಕೆ ನೋಂದಣಿಗೆ ಸಮಸ್ಯೆ ಎದುರಿಸುತ್ತಿರುವ ಜನರು ಈ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಅದು ಎಷ್ಟು ಸಮಂಜಸ ಎಂಬ ಪ್ರಶ್ನೆಗಳು ಮೂಡುವುದರೊಂದಿಗೆ ಕೇಂದ್ರ ಸರ್ಕಾರ ಕೂಡ ಅದಕ್ಕೆ ಅನುಮತಿ ನೀಡಬಾರದೆಂದು ತಾಕೀತು ಮಾಡಿದೆ.
ಇದೇ ರೀತಿ ಆಫರ್ನಡಿ ಮುಂಬೈನ ಅಂಧೇರಿ ಈಸ್ಟ್ನ ‘ದ ಲಲಿತ್ ಹೋಟೆಲ್’ನಲ್ಲಿ ವ್ಯವಸ್ಥೆ ಮಾಡಿದ್ದು, ಮಾಮೂಲಿ ಫ್ರಿಜ್ನಲ್ಲಿ ಕೋವಾಕ್ಸಿನ್ ಲಸಿಕೆಗಳನ್ನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಅವರು ನಿನ್ನೆ ತಪಾಸಣೆ ನಡೆಸಿದ್ದು, ಶೇಖರಿಸಿಟ್ಟ ಲಸಿಕೆಗಳನ್ನು ಜಪ್ತಿಪಡಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಐ ಡ್ರಾಪ್ಸ್ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ
ಸದರಿ ಹೋಟೆಲ್ ಸ್ಥಳೀಯ ಖಾಸಗಿ ಆಸ್ಪತ್ರೆಯಾದ ಕ್ರಿಟಿಕೇರ್ ಹಾಸ್ಪಿಟಲ್ನೊಂದಿಗೆ ಟೈಅಪ್ ಹೊಂದಿದ್ದು, 500 ಜನರಿಗೆ ಈಗಾಗಲೇ ಲಸಿಕೆ ನೀಡಿದೆ. ಆಸ್ಪತ್ರೆಯೇ ಈ ಪ್ರಸ್ತಾವನೆ ನೀಡಿದ್ದು, ಒಬ್ಬರೇ ವಾಸಿಸುವವರು ಈ ರೀತಿ ಹೊಟೆಲ್ಗೆ ಬಂದು ಲಸಿಕೆ ಪಡೆಯಬಹುದು ಎಂದು ಆರಂಭಿಸಿದ್ದಾರೆ. ಹೊಟೆಲ್ನವರನ್ನು ಬೈಯ್ಯುವ ಹಾಗಿಲ್ಲ. ಆದರೆ ಆಸ್ಪತ್ರೆಯು ಲಸಿಕೆಯ ಕೋಲ್ಡ್ ಸ್ಟೋರೇಜ್ ಬಗೆಗಿನ ನಿಯಮಗಳನ್ನು ಪಾಲಿಸಿಲ್ಲ ಎಂದು ಪೆಡ್ನೆಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಪಾಲಿಕೆ ಕೇಂದ್ರಗಳಲ್ಲೇ ಕೋವಾಕ್ಸಿನ್ ಲಭ್ಯವಿಲ್ಲ. ಅಂದ ಮೇಲೆ ಇವರಿಗೆ ಕೋವಾಕ್ಸಿನ್ ಹೇಗೆ ಸಿಕ್ಕಿತು. ಮಾಮೂಲಿ ಫ್ರಿಜ್ನಲ್ಲಿ ಲಸಿಕೆಗಳನ್ನು ಇಟ್ಟಿರುವುದನ್ನು ನಾನು ಪತ್ತೆ ಹಚ್ಚಿದ್ದೇನೆ. ಇದರಿಂದ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಉಂಟಾಗಬಹುದು. ಲಸಿಕೆ ಜಪ್ತಿಪಡಿಸಿಕೊಂಡು ತನಿಖೆ ಆದೇಶಿಸಲಾಗಿದೆ” ಎಂದಿದ್ದಾರೆ. (ಏಜೆನ್ಸೀಸ್)
VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !