ಧರ್ಮಶಾಲಾ: ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಆದರೆ ಕಳೆದ 20 ವರ್ಷಗಳಿಂದ ಕಿವೀಸ್ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆ ಭಾರತವನ್ನು ಕಾಡುತ್ತಿದೆ.
ಭಾರತ ತಂಡ ಕೊನೆಯದಾಗಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಗೆದ್ದಿರುವುದು 2003ರ ಏಕದಿನ ವಿಶ್ವಕಪ್ನಲ್ಲಿ! ಆ ಬಳಿಕ 2007, 2016, 2021ರ ಟಿ20 ವಿಶ್ವಕಪ್ ಲೀಗ್ ಪಂದ್ಯ ಮತ್ತು 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಕಿವೀಸ್ಗೆ ಶರಣಾಗಿದೆ. 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲೂ ಭಾರತ ಮುಗ್ಗರಿಸಿತ್ತು. ಒಟ್ಟಾರೆಯಾಗಿ ಐಸಿಸಿ ಟೂರ್ನಿಯ 13 ಮುಖಾಮುಖಿಗಳಲ್ಲಿ ಭಾರತ 3ರಲ್ಲಿ ಮಾತ್ರ ಜಯಿಸಿದೆ. ತವರಿನಲ್ಲೇ ನಡೆದ 1987ರ ಏಕದಿನ ವಿಶ್ವಕಪ್ನಲ್ಲಿ 2 ಬಾರಿ ಕಿವೀಸ್ ವಿರುದ್ಧ ಗೆದ್ದಿರುವುದು ಭಾರತಕ್ಕೆ ಈಗ ಸ್ಫೂರ್ತಿಯಾಗಬೇಕಿದೆ.
ವೇಗದ ಬೌಲಿಂಗ್-ಸ್ನೇಹಿ ಪಿಚ್
ಬೆಟ್ಟಗುಡ್ಡಗಳ ನಡುವೆ ಇರುವ ಎಚ್ಪಿಸಿಎ ಕ್ರೀಡಾಂಗಣದ ಪಿಚ್ ವೇಗದ ಬೌಲರ್ಗಳಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ. ಚೆಂಡಿನ ಚಲನೆಗೆ ಗಾಳಿಯ ನೆರವು ಲಭಿಸುವುದು ಇದಕ್ಕೆ ಕಾರಣ. ಉಭಯ ತಂಡಗಳೂ ಅನುಭವಿ ವೇಗಿಗಳನ್ನು ಹೊಂದಿರುವುದರಿಂದ ಪಂದ್ಯ ಕುತೂಹಲ ಕೆರಳಿಸಿದೆ. ಭಾರತೀಯ ಬ್ಯಾಟರ್ಗಳಿಗೆ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಗ್ಯುರ್ಸನ್ ಸವಾಲಾಗಲಿದ್ದರೆ, ಕಿವೀಸ್ ಬ್ಯಾಟರ್ಗಳಿಗೆ ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಮೊಹಮದ್ ಶಮಿ ಕಂಟಕವಾಗಬಲ್ಲರು.
ವಿಶ್ವಕಪ್ನಲ್ಲಿ ‘ಓಂ’ ಬರೆದ ಬ್ಯಾಟ್ನಲ್ಲಿ ಆಡುತ್ತಿದ್ದಾರೆ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್!