ಹೊಸಪೇಟೆ: ಪ್ರಜಾಪ್ರಭುತ್ವ ನಮಗೆ ಮತದಾನದ ಹಕ್ಕನ್ನು ನೀಡಿದ್ದು, ಪ್ರತಿಯೊಬ್ಬರೂ ಮತಹಕ್ಕನ್ನು ಮರೆಯದೆಯೆ ಚಲಾಯಿಸಬೇಕು ಎಂದು ಹಿರಿಯ ರಂಗಕರ್ಮಿ ಪಿ.ಅಬ್ದುಲ್ ಹೇಳಿದರು.
ವಿಶ್ವ ರಂಗಭೂಮಿ ದಿನದ ಅಂಗವಾಗಿ ಭಾವೈಕ್ಯತಾ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಹಾಗೂ ವಿಶ್ವರಂಗಭೂಮಿ ದಿನ ವಿಶೇಷ ಜಾಥಾಕ್ಕೆ ಟೌನ್ರೀಡಿಂಗ್ಹಾಲ್ ಬಳಿ ಚಾಲನೆ ನೀಡಿ, ಮಾತನಾಡಿದರು.
ರಂಗಭೂಮಿ ಮಾನವ ವಿಕಾಸಕ್ಕೆ ಪೂರಕವಾಗಿದೆ. ಮೂಢನಂಬಿಕೆ, ಅಜ್ಞಾನ ಕಳೆಯಲು ರಂಗಚಟುವಟಿಕೆಗಳು ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಕಲಾವಿದರನ್ನು ಸಮಾಜ ಸದಾ ಪ್ರೋತ್ಸಾಹಿಸಬೇಕು ಎಂದರು. ನಂತರ ಮತದಾನ ಜಾಗೃತಿ ಜಾಥಾ ನಡೆಯಿತು. ಹವ್ಯಾಸಿ ಕಲಾವಿದರಾದ ಷೇಕ್ಷಾವಲಿ, ಕಬೀರ್, ಅಮೃತಾ ಇತರರು ಇದ್ದರು.