ಹೊಸಪೇಟೆ: ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದವರ ಬೆಂಗಳೂರು ಮೂಲದ ಇಬ್ಬರು ತುಂಗಭದ್ರಾ ನದಿಯಲ್ಲಿ ನೀರುಪಾಲಾಗಿರುವ ಂಘಟನೆ ಬುಧವಾರ ನಡೆದಿದೆ. ಕೊಚ್ಚಿ ಹೋದವರನ್ನು ಬೆಂಗಳೂರಿನಲ್ಲಿ ಅಟ್ಟೂರ್ ಲೇಔಟ್ನ ನಿವಾಸಿಗಳಾದ ಜೀವ(18), ಹರೀಶ್ ಕುಮಾರ್(18) ಎಂದು ಗುರುತಿಸಲಾಗಿದೆ.
ಹರೀಶ್ ಖಾಸಗಿ ಉದ್ಯೋಗಿಯಾಗಿದ್ದು, ಜೀವ ಪ್ರಥಮ ವರ್ಷದ ಐಟಿಐ ವಿದ್ಯಾರ್ಥಿಯಾಗಿದ್ದು, ಅದೇ ಲೇಔಟ್ನ ತಮ್ಮ ಇತರೆ ಮೂವರು ಸಹಪಾಠಿಗಳೊಂದಿಗೆ ನಿನ್ನೆ ಬಳ್ಳಾರಿಯಲ್ಲಿ ಸ್ನೇಹಿತನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು. ಬಳ್ಳಾರಿಯ ಇತರೆ ಮೂವರು ಗೆಳೆಯರೊಂದಿಗೆ ಬುಧವಾರ ಹಂಪಿಗೆ ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುರಂದರ ಮಂಟಪ ಬಳಿ ನದಿಯಲ್ಲಿ ಈಜಲು ತೆರಳಿದ್ದು, ಅವರಲ್ಲಿ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ, ಕಣ್ಮೆರೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ, ಮುಳುಗು ತಜ್ಞರು ಸ್ಥಳಕ್ಕೆ ದಾವಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಹಂಪಿ ಠಾಣೆಯ ಸಿಪಿಐ ಶಿವರಾಜ್, ಪಿಎಸ್ಐ ಕರಿಯಪ್ಪ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.