ಹೊಸಪೇಟೆ: ತಾಲೂಕಿನ 34 ಪರೀಕ್ಷೆ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಗಣಿತ, ಸಮಾಜಶಾಸ ಹಾಗೂ ವಿಜ್ಞಾನ ವಿಷಯದ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಯಿತು.
ಈ ಮೂರು ವಿಷಯದ ಪರೀಕ್ಷೆಗೆ ಪುನರಾವರ್ತಿತರು ಸೇರಿ ತಾಲೂಕಿನಲ್ಲಿ 6805 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 6775 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30 ವಿದ್ಯಾರ್ಥಿಗಳು ಗೈರಾಗಿದ್ದರು.
ಕೇಂದ್ರಗಳ ಗೇಟ್ ಬಳಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಕೊಠಡಿಗಳಿಗೆ ಕಳಹಿಸಲಾಯಿತು. ಬೆಳಗ್ಗೆ 8ಗಂಟೆ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಬರತೊಡಗಿದರು. ಬೆಳಗ್ಗೆ 10.30ಕ್ಕೆ ಆರಂಭವಾದ ಪರಿಕ್ಷೆ ಮಧ್ಯಾಹ್ನ 1.30ಕ್ಕೆ ಮುಗಿಯಿತು.
ಪರದಾಡಿದ ವಿದ್ಯಾರ್ಥಿನಿ: ಪರೀಕ್ಷಾ ಕೇಂದ್ರದ ವಿಳಾಸ ತಿಳಿಯದೆ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಹಾಗೂ ಆಕೆಯ ತಂದೆ ಪರದಾಡಿದರು. ವಿದ್ಯಾರ್ಥಿನಿಯ ಪ್ರವೇಶ ಪತ್ರದಲ್ಲಿ ಪರೀಕ್ಷೆ ಕೇಂದ್ರದ ಹೆಸರು ಎಂ.ಪಿ.ಪ್ರಕಾಶ್ ನಗರದ ಮಾರ್ಕಂಡೇಶ್ವರ ಶಾಲೆ ಎಂದಿದೆ. ಆದರೆ, ವಿದ್ಯಾರ್ಥಿನಿ ಬಸ್ ನಿಲ್ದಾಣ ಬಳಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕೇಂದ್ರಕ್ಕೆ ಬಂದಿದ್ದಾಳೆ. ಬಳಿಕ ಶಿಕ್ಷಕರೊಬ್ಬರು ಪರೀಕ್ಷಾ ಕೇಂದ್ರದ ವಿಳಾಸ ತಿಳಿಸಿ ಕಳುಹಿಸಿದರು.
ಪ್ರತ್ಯೇಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿ: ನಗರದ ಬಳ್ಳಾರಿ ರಸ್ತೆಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಸರ್ಕಾರಿ ಪ್ರೌಢಶಾಲೆ ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬರ ಥರ್ಮಲ್ ಸ್ಕ್ರೀನಿಂಗ್ ಮಾಡಿದಾಗ 100 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಯಿಸಲಾಯಿತು.