ಹೊಸಪೇಟೆ: ರೈತರ ಹಿತದೃಷ್ಟಿಯಿಂದ ನಿಯಮಗಳನ್ನು ಸಡಿಲಿಕೆ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಮಂಜೂರು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದ್ದಾಗಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ತಿಳಿಸಿದರು.
ನಾಲ್ವರು ಬಗರ್ಹುಕುಂ ಸಾಗುವಳಿದಾರರಿಗೆ ತಮ್ಮ ನಿವಾಸದಲ್ಲಿ ಭಾನುವಾರ ಪಟ್ಟಾ ವಿತರಿಸಿ ಮಾತನಾಡಿದರು. ತಾಲೂಕಿನ ಕಮಲಾಪುರ, ತಿಮ್ಲಾಪುರ, ಬುಕ್ಕಸಾಗರ, ವೆಂಕಟಾಪುರ, ಬುಕ್ಕಸಾಗರ ಮತ್ತಿತರ ಗ್ರಾಮಗಳ ರೈತರಿಂದ ಕಂದಾಯ ಇಲಾಖೆಗೆ ಸುಮಾರು 516 ಅರ್ಜಿ ಸಲ್ಲಿಕೆಯಾಗಿದೆ. ಆ ಪೈಕಿ ಈ ವರೆಗೆ 69 ರೈತರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಇನ್ನುಳಿದ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಅನೇಕ ರೈತರ ಬಳಿಕ ಸಮಗ್ರ ದಾಖಲೆಗಳಿಲ್ಲ. ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಕಾನೂನು ವ್ಯಾಪ್ತಿಯನ್ನು ಮೀರದೆ, ಕೆಲ ನಿಮಯಗಳನ್ನು ಸಡಿಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಹಕ್ಕು ಪತ್ರ ಕಲ್ಪಿಸಲು ಸಲಹೆ ನೀಡಿದ್ದೇನೆ. ಆದರೂ, ಸಂಪೂರ್ಣವಾಗಿ ಕಾಯ್ದೆ ಉಲ್ಲಂಘಿಸಲಾಗದು. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.