ಹೊಸಪೇಟೆ: ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಕುಮಾರ್ ಲಂಚ ಸ್ವೀಕರಿಸುತ್ತಿರುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಕಾರಣ ಸಿಎಂ ಬಸವರಾಜ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಾ. 9 ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಅಂದು ಬೆಳಗ್ಗೆ 9 ರಿಂದ 11 ಗಂಟೆ ವರೆಗೆ ಬಂದ್ ನಡೆಸಲಾಗುವುದು. ನಗರದ ಗಾಂಧಿ ಚೌಕ್ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಸಲಾಗುವುದು. ಬಂದ್ಗೆ ವರ್ತಕರು, ಹೋಟೆಲ್ಉದ್ಯಮಿಗಳು, ಸಾರ್ವಜನಿಕರು ಸಹಕರಿಸಬೇಕು ಎಂದರು.
ಲೋಕಾಯುಕ್ತರು ಕೊಟ್ಯಂತರ ರೂ. ಜಪ್ತಿ ಮಾಡಿದ್ದಾರೆ. ಇದು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿಯಾಗಿದೆ. ಪಿಎಸ್ಐ ನೇಮಕಾತಿ, ಪ್ರಾಧ್ಯಾಪಕರ ನೇಮಕಾತಿ, ಕೋವಿಡ್, ವಿವಿಗಳ ನೇಮಕಾತಿ, ಬಿಡಿಸಿಸಿ ಬ್ಯಾಂಕ್ ನೇಮಕಾತಿ ಮತ್ತಿತರ ಹಗರಣಗಳ ಸರಮಾಲೆಯನ್ನು ಬಿಜೆಪಿ ಹೊತ್ತುಕೊಂಡಿದೆ ಎಂದು ಕುಟುಕಿದರು.
ಕಾಂಗ್ರೆಸ್ ಮುಖಂಡರಾದ ಗುಜ್ಜಲ್ ನಾಗರಾಜ, ಮಾರೆಣ್ಣ, ಸತ್ಯನಾರಾಯಣ, ಖಾಜಾಹುಸೇನ್, ವೀರಭದ್ರನಾಯಕ ಇತರರಿದ್ದರು.