ಹೊಸದುರ್ಗ: ವಿದ್ಯೆಯಿಂದ ಮನುಷ್ಯನ ಜ್ಞಾನ ವಿಕಾಸವಾದರೆ ಕ್ರೀಡೆಯು ದೈಹಿಕ, ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಹೋಬಳಿ
ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪಠ್ಯ ಚಟುವಟಿಕೆಗಳ ಜತೆಗೆ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಸ್ವಾಸ್ಥೃ ಕಾಪಾಡಿಕೊಳ್ಳಬೇಕು.
ಇದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಲಿದೆ ಎಂದರು.
ಮಕ್ಕಳಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉಂಟಾಗುವ ಪ್ರಯೋಜನಗಳ ಕುರಿತು ದೈಹಿಕ ಶಿಕ್ಷಕರು ಅರಿವು ಮೂಡಿಸುವ ಕೆಲಸ ಮಾಡುವ ಜತೆಗೆ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಬೇಕು ಎಂದು ತಿಳಿಸಿದರು.
ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಚೆನ್ನಾಗಿ ಆಡುವವರು ಜಯ ಸಾಧಿಸುತ್ತಾರೆ. ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ ಬದಲಾಗಿ ಪಾಲ್ಗೊಳ್ಳುವ ಉತ್ಸುಕತೆ ಇರಬೇಕು.
ಫಲಿತಾಂಶವನ್ನು ಸಾಮಾನ ಚಿತ್ತದಿಂದ ಸ್ವೀಕರಿಸಬೇಕು. ಸೋತವರು ಹಿಂಜರಿಯದೆ ಸತತ ಪ್ರಯತ್ನದಿಂದ ಗೆಲುವು ಸಾಧಿಸಬೇಕು. ಗೆದ್ದವರೊಂದಿಗೆ ಬೆರೆತು ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಬೇಕು ಎಂದರು.
ಬಿಇಒ ಸೈಯದ್ ಮೋಸಿನ್ ಮಾತನಾಡಿ, ಹೋಬಳಿ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡಿರುವ ಎಲ್ಲ ಕ್ರೀಡಾಪಟುಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕೂಟವನ್ನು ಯಶಸ್ವಿಗೊಳಿಸಬೇಕು.
ಸ್ವರ್ಧಾ ಮನೋಭಾವನೆಯಿಂದ ಆಟಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಿ ಜಿಲ್ಲಾ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ಶಾಸಕ ಬಿ.ಜಿ.ಗೋವಿಂದಪ್ಪ ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಪಥ ಸಂಚಲನ ನಡೆಸಿದ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್.ಲಕ್ಷ್ಮಯ್ಯ, ಬಿಆರ್ಸಿ ಶ್ರೀನಿವಾಸ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ, ಪ್ರಶಾಂತ್, ದಿವಾಕರ್, ನಿಂಗಪ್ಪ, ತಿಪ್ಪೇಶ್ ಇತರರಿದ್ದರು.
ಪಾಲಕರ ಅಸಮಾಧಾನ: ಮಳೆಯ ನಡುವೆ ಕ್ರೀಡಾಕೂಟ ಆಯೋಜಿಸಿರುವುದರಿಂದ ಪಾಲಕರು ಅಸಮಾಧಾನಗೊಂಡರು. ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕ್ರೀಡಾಂಗಣ ಕೆಸರು ಗದ್ದೆಯಾಗಿದೆ.
ಕ್ರೀಡಾಕೂಟ ಕೇವಲ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸಿಮೀತವಾಗಿತ್ತು. ಕ್ರೀಡೆಗಳನ್ನು ನಡೆಸಲು ಮಳೆ ಅಡ್ಡಿಯಾಯಿತು. ಮಕ್ಕಳು ಬೆಳಗ್ಗೆಯಿಂದಲೂ ಮಳೆಯಲ್ಲಿ ನೆನೆದು ಶೀತದಿಂದ ನಡುಗುತ್ತಿದ್ದ ದೃಶ್ಯ ಕಂಡುಬಂತು.