More

    ಹೊಸದುರ್ಗಕ್ಕೆ ಭದ್ರೆ ಹರಿಸಲು ಸಿಎಂ ಅಸ್ತು

    ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೈ ಬಿಡಲಾಗಿದ್ದ ತಾಲೂಕಿನ 38 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಮತ್ತು ಭದ್ರಾ ನಾಲೆ ಎಡ ಭಾಗದ ಜಮೀನುಗಳಿಗೆ ಹನಿ ನೀರಾವರಿ ಕಲ್ಪಿಸುವ 520 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅನುಮೋದನೆ ನೀಡುವ ಮೂಲಕ ತಾಲೂಕಿನ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.

    ಭದ್ರಾ ಮೇಲ್ದಂಡೆ ಯೋಜನೆ ಅವಕೃಪೆಗೆ ಒಳಗಾಗಿದ್ದ ತಾಲೂಕಿನ 38 ಗ್ರಾಮಗಳ ಕೆರೆಗಳಿಗೆ ಹಾಗೂ ಸಾವಿರಾರು ಎಕರೆ ಕೃಷಿ ಭೂಮಿಗೆ ಭದ್ರಾ ನೀರು ಹರಿಸುವ ಯೋಜನೆಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸತತ ಪ್ರಯತ್ನ ನಡೆಸಿ ಮಂಜೂರಾತಿ ಪಡೆಯುವ ಮೂಲಕ ತಾಲೂಕಿನ ರೈತರ ಪಾಲಿಗೆ ಭಗೀರಥರಾಗಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ 520 ಕೋಟಿ ರೂ. ಮೊತ್ತದ ಈ ಬೃಹತ್ ಯೋಜನೆಗೆ ಅನುಮೋದನೆ ಸಿಕ್ಕಿದೆ. ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಅಂತೂ ನೀರು ಹರಿಸಲು ಸರ್ಕಾರ ಮುಂದಾಗಿರುವುದು ತಾಲೂಕಿನ ಜನರಿಗೆ ವರದಾನವಾಗಿದೆ.

    ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ: ಸರ್ಕಾರದ ಈ ಕ್ರಮದಿಂದ ಹೊಸದುರ್ಗ ತಾಲೂಕಿನ ಬುರುಡೇಕಟ್ಟೆ, ಜಮ್ಮಾಪುರ, ಮಲ್ಲಪ್ಪನಹಳ್ಳಿ, ಹೆಬ್ಬಳ್ಳಿ, ಗೌಡಿಹಳ್ಳಿ, ದೇವಿಗೆರೆ, ಮಾವಿನಕಟ್ಟೆ, ಗಾಳಿರಂಗಯ್ಯನಹಟ್ಟಿ, ರಂಗಯ್ಯನೂರು, ಗೂಳಿಹಟ್ಟಿ, ಕಡಿವಾಣಕಟ್ಟೆ, ಕೊಂಡಾಪುರ, ಕೃಷ್ಣಾಪುರ, ಜಂತಿಕೊಳಲು, ಹೇರೂರು, ಚಿಕ್ಕಮ್ಮನಹಳ್ಳಿ, ಚಕ್ಕಯಗಟಿ, ಹೊಸಹಳ್ಳಿ, ಕಬ್ಬಳ, ಹೆಬ್ಬಳ್ಳಿ, ಕಲ್ಲಹಳ್ಳಿ, ಗುತ್ತಿಕಟ್ಟೆ, ಕುಂಬಾರಕಟ್ಟೆ, ನಾಗರಕಟ್ಟೆ, ವೀರಾಪುರ, ಹೊಸಹಟ್ಟಿ, ಕರಿಯಪ್ಪನಹಟ್ಟಿ, ಬಾಲೇಹಳ್ಳಿ, ತುಂಬಿನಕೆರೆ, ಬೀಸನಹಳ್ಳಿ, ದಾಸರಹಳ್ಳಿ, ದೊಡ್ಡಘಟ್ಟ, ಮಲ್ಲಾಪುರ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಪಾಪೇನಹಳ್ಳಿ, ದುಗ್ಗಾವರ, ನವಿಲುಕಲ್ಲುಹಟ್ಟಿ ಸೇರಿದಂತೆ 38 ಗ್ರಾಮಗಳ ಕೆರೆಗಳು ಹಾಗೂ ಕೃಷಿ ಜಮೀನುಗಳು ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ.

    ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ನಾಲೆ ಹಾದು ಹೋಗುವ ಮಾರ್ಗದ ಎಡ ಭಾಗದಲ್ಲಿರುವ 38 ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದವು. ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರ ಪರಿಣಾಮ ಇಂದು ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

    ಗೂಳಿಹಟ್ಟಿ ಶೇಖರ್ ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts