ಹೊಸಪೇಟೆ: ಪಾಲಕರು ಮಕ್ಕಳ ಚಲನವಲನ, ಓದು, ಶಿಸ್ತು ಇತ್ಯಾದಿ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕೆಂದು ಬೆಂಗಳೂರು ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.
ವಿಜಯನಗರ ಪ್ರತಿಷ್ಠಾನ ಹಾಗೂ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದಿಂದ ಭಾನುವಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರ ನಿರ್ಮಾಣ-ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ವ್ಯಕ್ತಿತ್ವದ ರೂಪಿಸುವ ಪ್ರಮುಖ ಭಾಗವಾಗಬೇಕಿದ್ದ ಒಳ್ಳೆಯ ಆಲೋಚನೆಗಳಿಂದ ಯುವಜನರು ವಿಮುಖರಾಗುತ್ತಿದ್ದಾರೆ. ರಾಷ್ಟ್ರದ ಭವಿಷ್ಯ ಮೊದಲು ನಾಲ್ಕು ಗೋಡೆಯಲ್ಲಿ ನಿರ್ಮಾಣವಾಗುತ್ತೆ. ಮೊದಲ ಹಂತವೇ ಮನೆ ಹಾಗೂ ಪಾಲಕರು. ಹೀಗಾಗಿ ಪಾಲಕರು ಆದರ್ಶವಾಗಿರಬೇಕು ಎಂದು ಹೇಳಿದರು.
ರಾಷ್ಟ್ರ ಎಂಬುದು ಕೇವಲ ಅಮೂರ್ತ ಕಲ್ಪನೆಯಲ್ಲ, ಪ್ರತಿಯೊಬ್ಬರೂ ಕೈಜೋಡಿಸುವುದರಿಂದ ರಾಷ್ಟ್ರ ನಿರ್ಮಾಣ ಸಾಧ್ಯ. ಸಮಾಜದ ಪ್ರತಿ ಸಮಸ್ಯೆ ನನ್ನ ಸಮಸ್ಯೆ ಎನ್ನುವ ಭಾವನೆ ಬರಬೇಕು. ಸ್ವಯಂ ಜಾಗೃತಿಯಿಂದ ಉತ್ತಮ ಕಾನೂನು ವ್ಯವಸ್ಥೆ ಬರುತ್ತದೆ ಎಂದರು.
ಭೌತಿಕ ಶ್ರೀಮಂತಿಕೆ, ಜನಪ್ರತಿನಿಧಿಗಳು, ಅಧಿಕಾರಗಳ ಜತೆ ಸಮಾಜದ ಅನ್ಯಾಯ ಪ್ರಶ್ನಿಸುವ ಪ್ರಜೆ, ಮಾಧ್ಯಮ ಅಥವಾ ಸಾಹಿತಿಗಳೇ ಆಗಲಿ ಅವರ ಕರ್ತವ್ಯದಿಂದ ರಾಷ್ಟ್ರ ನಿರ್ಮಾಣಗೊಳ್ಳುತ್ತದೆ ಎಂದರು.
ಎಸಿ ಸಿದ್ಧರಾಮೇಶ್ವರ ಮಾತನಾಡಿ, ರಾಷ್ಟ್ರಗೀತೆ ನಮ್ಮ ನೆಚ್ಚಿನ ಗೀತೆಯಾಗಿ, ಸಂವಿಧಾನ ನಮ್ಮ ನೆಚ್ಚಿನ ಪುಸ್ತಕವಾಗಬೇಕು. ರಾಷ್ಟ್ರ ಗೀತೆಯ ಪ್ರತಿ ಸಾಲುಗಳನ್ನು ಅರ್ಥೈಸಿಕೊಂಡರೆ ಸ್ಫೂರ್ತಿ ಸಿಗುತ್ತದೆ. ಸಾಮಾನ್ಯ ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸ್ಪರ್ಧಾಕಂಕ್ಷಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಪ್ರಾಧ್ಯಾಪಕ, ಸಾಹಿತಿ ಮೃತ್ಯುಂಜಯ ರುಮಾಲೆ, ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಗೌಡ ದಾನಪ್ಪಗೌಡ, ವಿಜಯನಗರ ಪ್ರತಿಷ್ಠಾನದ ಪಿ.ದಿವಾಕರ ನಾರಾಯಣ, ಯರಿಯಪ್ಪಗೌಡ ಇದ್ದರು.